ಮಹಾಲಿಂಗಪುರ: ಭಾರತದ ಪ್ರಾಚೀನ ಶಿಕ್ಷಣ ಪದ್ಧತಿಗಳಲ್ಲಿ ಒಂದಾದ ಗುರುಕುಲ ಮಾದರಿ ಉತ್ತಮ ಸಮಾಜ ನಿರ್ಮಿಸುವ ನಾಗರಿಕರನ್ನು ತಯಾರು ಮಾಡುತ್ತದೆ, ಜಗತ್ತು ಎಷ್ಟೇ ಮುಂದುವರೆದರೂ ಗುರುಕುಲ ಪದ್ಧತಿಯ ಶಿಕ್ಷಣ ಮಾದರಿ ಇಂದಿಗೂ ಪ್ರಸ್ತುತವಾಗಿದೆ ಎಂದು ಹೆಸ್ಕಾಂ ಸಹಾಯಕ ಎಂಜಿನಿಯರ್ ಮಂಜುನಾಥ ಬೋಕಿ ಹೇಳಿದರು.
ಸಮೀಪದ ಜ್ಞಾನ ಗುರುಕುಲ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಗುರುಕುಲ ಸಂಭ್ರಮ 2017ಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವದಲ್ಲಿಯೇ ಹೆಸರು ಮಾಡಿದ್ದ ಕೆಲವೇ ವಿಶ್ವ ವಿದ್ಯಾಲಯಗಳಲ್ಲಿ ಭಾರತದ ನಾಲಂದಾ ಹಾಗೂ ಸಾಲೋಟಗಿಯ ವಿಶ್ವವಿದ್ಯಾಲಯಗಳು ಗುರುಕುಲ ಮಾದರಿಯ ಶಿಕ್ಷಣ ನೀಡುತ್ತಿದ್ದವು ಎಂದು ಹೇಳಿದರು.
ಪುರಸಭೆಯ ಮಾಜಿ ಅಧ್ಯಕ್ಷ ಶೇಖರ ಅಂಗಡಿ ಮಾತನಾಡಿ ಜ್ಞಾನ ಗುರುಕುಲ ಶಾಲೆ ಸತತ 20 ವರ್ಷಗಳಿಂದ ಉತ್ತಮ ಸಾಧನೆ ಮಾಡಿ ಗ್ರಾಮೀಣ ಮಕ್ಕಳ ಬಾಳಿಗೆ ಬೆಳಕಾಗಿದೆ, ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಇಲ್ಲಿ ನೀಡುವ ಶಿಕ್ಷಣದಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಎಂ.ಎಸ್. ತೆಗ್ಗಿನಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮಾತನಾಡಿದರು. ಆಂಗ್ಲ ಮಾಧ್ಯಮ ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ಜ್ಯೋತಿ ಖವಾಸಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೈಲಜಾ ಗುರವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತೃಪ್ತಿ ಕಟ್ಟಿ ಪ್ರಾರ್ಥಿಸಿದರು, ಹರ್ಷಿತಾ ಉತ್ತಂಗಿ ಸ್ವಾಗತಿಸಿದರು, ಅಜೇಯ ಕಡೆಮನಿ ವಂದಿಸಿದರು, ಅಲ್ಲಾಭಕ್ಷ ಮೊಖಾಸಿ ಮತ್ತು ಗಜಾನನ ನಾಯ್ಕ್ ನಿರೂಪಿಸಿದರು.