ಕನಕ ವೇದಿಕೆ (ಬಾದಾಮಿ): ಕಾಳಿದಾಸ ವಿರಚಿತ ಕೃತಿಗಳು ಭಾರತದ ಸಾಹಿತ್ಯ ಕ್ಷೇತ್ರದಲ್ಲಿಯೇ ಮೌಲ್ವಿಕ ಕೃತಿಗಳಾಗಿವೆ ಎಂದು ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮತ್ತು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿದರು.
ಇಲ್ಲಿನ ಕಾಳಿದಾಸ ಶಿಕ್ಷಣ ಸಂಸ್ಥೆಯ ಕನಕ ವೇದಿಕೆಯಲ್ಲಿ ಶನಿವಾರ ಜರುಗಿದ ಕಾಳಿದಾಸ ಉತ್ಸವದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ, ಸಂಸ್ಕೃತ ಭಾಷೆಯಲ್ಲಿ ರಚಿಸಿದ ಕೃತಿಗಳೆಲ್ಲ ಭಾರತೀಯ ಬೇರೆ ಬೇರೆ ಭಾಷೆಯಲ್ಲಿ ಪ್ರಕಟವಾಗಿವೆ ಎಂದರು.
ಉತ್ಸವಕ್ಕೆ ಚಾಲನೆ ನೀಡಿದ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಕಾಳಿದಾಸ ಶಿಕ್ಷಣ ಸಂಸ್ಥೆಯು ಬಡವರ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಧಾರೆಯೆರೆಯುವ ಕಾರ್ಯ ಶ್ಲಾಘನೀಯ ಎಂದರು.
ಕೈಮಗ್ಗ ನಿಗಮದಿಂದ ಹೊಸ ಯೋಜನೆಗಳನ್ನು ರೂಪಿಸಿ ನಿಗಮಕ್ಕೆ ಒಂದು ನೂತನ ಕಾಯಕಲ್ಪ ತರುವ ಯೋಜನೆ ರೂಪಿಸಲಾಗಿದೆ. ರಾಜ್ಯದ ನೇಕಾರ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ನಜೀರ ಕಂಗನೊಳ್ಳಿ ಸನ್ಮಾನ ಪಡೆದು ಬೆಳಗಾವಿ, ರಬಕವಿ ಮತ್ತು ಜಮಖಂಡಿ ಸೇರಿದಂತೆ ಉತ್ತರ ಕರ್ನಾಟಕದ ಐದು ಸ್ಥಳಗಳಲ್ಲಿ ಬಟ್ಟೆ ಉತ್ಪಾದನೆ ಘಟಕಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಹೇಳಿದರು.
‘ನಮ್ಮ ನಡಿಗೆ ಸ್ವಚ್ಛತೆಯ ಕಡೆಗೆ’ ಎಂಬ ಘೋಷಣೆಯಂತೆ ಉತ್ಸವದಲ್ಲಿ 120 ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಕಾಳಿದಾಸ ಶಿಕ್ಷಣ ಸಂಸ್ಥೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಮೌನೇಶ್ವರ ಸ್ವಾಮೀಜಿ, ತಾಂತ್ರಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಎಸ್.ಎ. ಸತ್ಯನಾರಾಯಣಶೆಟ್ಟಿ, ಕಾಳಿದಾಸ ಸಂಸ್ಥೆ ಆಡಳಿತಾಧಿಕಾರಿ ಶರಣಗೌಡ ಪಾಟೀಲ, ತಹಶೀಲ್ದಾರ್ ಎಸ್. ರವಿಚಂದ್ರ , ಪಿಎಸ್ಐ ಎನ್.ಆರ್.ಕಿಲಾರೆ ಮತ್ತು ಕಾಳಿದಾಸ ಶಿಕ್ಷಣ ಸಂಸ್ಥೆಯ ನಿರ್ದೇಶಕರು ಹಾಜರಿದ್ದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಸ್ವಾಗತಿಸಿದರು.
***
ಕಾರ್ಮಿಕರಿಗಾಗಿ ಹಾಗೂ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಹೊಸ ಕಾಯಕಲ್ಪ ತರುವ ಯೋಜನೆ ಮತ್ತು ಯೋಚನೆ ಸರ್ಕಾರದ ಮಟ್ಟದಲ್ಲಿ ಇದೆ
-ರವೀಂದ್ರ ಕಲಬುರ್ಗಿ
ಅಧ್ಯಕ್ಷ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ