ಶಿಗ್ಗಾವಿ:‘ಜನರ ಹಾರೈಕೆ ಹಾಗೂ ಬೆಂಬಲ ಪೂರಕ ಪ್ರೋತ್ಸಾಹ ನಮ್ಮ ಅಭಿವೃದ್ಧಿ ಕಾಯಕಕ್ಕೆ ಶ್ರೀರಕ್ಷೆಯಾಗಿದೆ. ಈ ಋಣವನ್ನು ತೀರಿಸಲು ಸಾಧ್ಯವಿಲ್ಲ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಭಾವುಕರಾಗಿ ನುಡಿದರು.
ಪಟ್ಟಣದಲ್ಲಿ ಶನಿವಾರ 57ನೇ ಜನ್ಮ ದಿನಾಚರಣೆ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಹಾಗೂ ಅಭಿಮಾನಿ ಕಾರ್ಯಕರ್ತರ ಬಳಗ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಜನರ ಪ್ರೀತಿ, ವಿಶ್ವಾಸದ ತಕ್ಕಡಿಯಲ್ಲಿ ಅಧಿಕಾರ, ಸ್ಥಾನಮಾನದ ತೂಕ ಆಟುಕ್ಕುಂಟು, ಲೆಕ್ಕಕ್ಕಿಲ್ಲ. ಈ ನಿಟ್ಟಿನಲ್ಲಿ ಜನರು ನೀಡಿದ ಶಕ್ತಿಯನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಿಸಿದ್ದೇನೆ. ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಂಡಿಲ್ಲ’ ಎಂದರು.
‘ರಾಜಕೀಯ ರಹಿತ ಸಂಘಟನೆ ಮೂಲಕ ಬೆಳೆದ ನನಗೆ ಜನರು ರಾಜಕೀಯ ಶಕ್ತಿ ತುಂಬಿದರು. ಜನರ ಸೇವೆ ಮಾಡಲು ನನ್ನ ತಂದೆ–ತಾಯಿ ಪ್ರೇರಣೆಗೆ, ಮಾರ್ಗದರ್ಶನಕ್ಕೆ ಋಣಿಯಾಗಿ ಕೆಲಸ ಮಾಡುತ್ತಿರುವೆ’ ಎಂದರು.
‘ಅಂದು ಅಧಿಕಾರವಿಲ್ಲದಿದ್ದರೂ ನೀರಾವರಿ ಯೋಜನೆಗಳ ಅನುಷ್ಠಾನದ ಮೂಲಕ ರೈತರ ಸ್ಪಂದನೆಗೆ ಧ್ವನಿಯಾಗಬೇಕು ಎಂದು ಆಜ್ಞೆ ಮಾಡಿದ ತಾಯಿ ಗಂಗಮ್ಮ ಬೊಮ್ಮಾಯಿ ಅವರ ಆಸೆಯನ್ನು ಜಲಸಂಪನ್ಮೂಲಕ ಸಚಿವ ನಾಗಿದ್ದಾಗ ಪಾಲಿಸಿದ್ದೇನೆ. ತಾಯಿ ತವರೂರು ಶಿಗ್ಗಾವಿ ಕ್ಷೇತ್ರದಲ್ಲಿ ಬೃಹತ್ ಏತ ನೀರಾವರಿ ಯೋಜನೆ ಮೂಲಕ ತಾಲ್ಲೂಕಿನಲ್ಲಿ ಕೆರೆ ತುಂಬಿಸುವ ಮಹತ್ವದ ಕೆಲಸ ಮಾಡಿದ್ದೇನೆ ಎಂದರು.
ಜನ್ಮದಿನ ನಿಮಿತ್ತ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು– ಹಂಪಲ ಹಂಚಲಾಯಿತು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತ, ಅಭಿಮಾನಿಗಳು ಬೊಮ್ಮಾಯಿ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದರು.
ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ ಸೇರಿದಂತೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಎಪಿಎಂಸಿ ಹಾಗೂ ಶಿಗ್ಗಾವಿ, ಬಂಕಾಪುರ ಪುರಸಭೆ ಸದಸ್ಯರು ಮತ್ತು ಪಕ್ಷದ ಅನೇಕ ಮುಖಂಡರು ಇದ್ದರು. ಶಿವಾನಂದ ಮ್ಯಾಗೇರಿ ನಿರೂಪಿಸಿದರು.