ಧಾರವಾಡ: ಕಳೆದೆರಡು ದಿನಗಳಿಂದ ಇಲ್ಲಿನ ರಂಗಾಯಣ ಆವರಣದಲ್ಲಿ ಹೆಜ್ಜೆ, ಗೆಜ್ಜೆಗಳ ಸದ್ದು. ಒಂದಡೆ ನೃತ್ಯ ಸ್ಪರ್ಧೆ ನಡೆಯುತ್ತಿದ್ದರೆ, ಇನ್ನೊಂದೆಡೆ ನೃತ್ಯ ಪ್ರಕಾರಗಳ ಕುರಿತ ವಿಚಾರ ಸಂಕಿರಣ, ಮತ್ತೊಂದೆಡೆ ನೃತ್ಯಕ್ಕೆ ಸಂಬಂಧಿಸಿದ ಪರಿಕರಗಳು, ಪುಸ್ತಕಗಳ ಮಾರಾಟ.
ಬೆಂಗಳೂರಿನ ಶಾಂಭವಿ ನೃತ್ಯ ಶಾಲೆ ಮತ್ತು ಸಾಕಾರ ಸಂಸ್ಥೆ ಆಯೋಜಿಸಿರುವ ನೃತ್ಯ ಜಾತ್ರೆಯಲ್ಲಿ ಕಂಡು ಬಂದ ದೃಶ್ಯಗಳಿವು. ಮೊಟ್ಟ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಇಂಥದೊಂದು ಜಾತ್ರೆಯಲ್ಲಿ ಮಕ್ಕಳಿಂದ ಹಿಡಿದು ವಿವಿಧ ವಯೋಮಾನದ ನೃತ್ಯ ಕಲಾವಿದರು. ಬೇರೆ, ಬೇರೆ ರಾಜ್ಯಗಳ ನೃತ್ಯತಂಡಗಳು ಭಾಗವಹಿಸಿದ್ದವು.
ಶನಿವಾರ ಆಸ್ಸಾಂ ತಂಡದ ಧಂಗಟ್, ಚೆನೈನ ಭರತನಾಟ್ಯ ತಂಡ, ಕೇರಳದ ಮೋಹಿನಿ ಅಟ್ಟಂ ನೃತ್ಯಗಳು ಜನಮನಸೂರೆಗೊಂಡವು. ಇದರೊಂದಿಗೆ ಮೋಹಿನಿ ಅಟ್ಟಂ ಕುರಿತು ಗಿರಿಜಾ ರೆಗಟ್ಟಾ, ಭರತನಾಟ್ಯ ಕುರಿತು ಚೆನೈನ ಶೀಲಾ ಉನ್ನಿಕೃಷ್ಣನ್, ರಂಗಭೂಮಿ ಕುರಿತು ರಜನಿ ಗರುಡ, ಮಣಿಪುರದ ಮಾರ್ಷಲ್ ಕಲೆ ಕುರಿತು ಅಸ್ಸಾಂನ ಬಿಸೇಶ್ವರ ಶರ್ಮಾ ಕಾರ್ಯಾಗಾರ ನಡೆಸಿಕೊಟ್ಟರು.
ಭಾನುವಾರ ಬೆಳಿಗ್ಗೆಯಿಂದ ವಿದ್ಯಾರ್ಥಿಗಳಿಗಾಗಿ ನೃತ್ಯ ಸ್ಪರ್ಧೆ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಓಡಿಸ್ಸಾ ತಂಡ ವಂದೇ ಮಾತರಂ, ವೈಷ್ಣವ ಜನತೋ ಮತ್ತು ಮಂಗಳಂ ನೃತ್ಯಗಳು ಆಕರ್ಷಕವಾಗಿ ಮೂಡಿ ಬಂದವು. ಜನರಿಗೆ ಪ್ರಿಯವಾದ ಹಾಡುಗಳನ್ನು ನೃತ್ಯ ಮತ್ತು ಅಭಿನಯದ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟರು.
ಇದರೊಂದಿಗೆ ಹಿರಿಯ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಮತ್ತು ಅವರ ಮಗಳು ಪ್ರತೀಕ್ಷಾ ಪ್ರಸ್ತುತಪಡಿಸಿದ ನೃತ್ಯ ರೂಪಕ ಕಲಾಸಕ್ತರನ್ನು ಹಿಡಿದಿಟ್ಟಿತು. ಕುಬ್ಜ ಮುದುಕಿಯೊಬ್ಬಳಿಗೆ ಕೃಷ್ಣ ಸದ್ಗತಿ ನೀಡುವ ಕಥಾಹಂದರ ಹೊಂದಿದ್ದ ನೃತ್ಯ ರೂಪಕದಲ್ಲಿ ಕುಬ್ಜ ಮುದುಕಿಯಾಗಿ ವೈಜಯಂತಿ ಕಾಶಿ ಮತ್ತು ಕೃಷ್ಣನಾಗಿ ಪ್ರತೀಕ್ಷಾ ಅತ್ಯುತ್ತಮ ಅಭಿನಯದ ಮೂಲಕ ಮನಸೂರೆಗೊಂಡರು. ಇವರೊಂದಿಗೆ ಸ್ಥಳೀಯ ಕಲಾವಿದರಾದ ಡಾ.ಸಮತಾ, ನವಮಿ ಉಪಾಧ್ಯೆ ಮತ್ತು ಸೃಷ್ಟಿ ಕುಲಕರ್ಣಿ ಪಾಲ್ಗೊಂಡಿದ್ದರು. ಇದಲ್ಲದೇ ಕೇರಳ ತಂಡದ ಕಲಾರಿಪಟ್ಟಂ ನೃತ್ಯ ಅತ್ಯಂತ ರೋಮಾಂಚಕಾರಿಯಾಗಿತ್ತು.
ಕಲಾರಿಪಟ್ಟು ಕುರಿತು ಕೇರಳದ ಎಸ್.ಆರ್.ಡಿ ಪ್ರಸಾದ, ಕುಚುಪುಡಿ ಕುರಿತು ವೈಜಯಂತಿ ಕಾಶಿ, ಓಡಿಸ್ಸಿ ನೃತ್ಯ ಕುರಿತು ಶರ್ಮಿಳಾ ಮುಖರ್ಜಿ, ಸಮಕಾಲೀನ ನೃತ್ಯದ ಕುರಿತು ಅಭಿಲಾಶ ನಂಜಪ್ಪ ಕಾರ್ಯಾಗಾರ ನಡೆಸಿಕೊಟ್ಟರು.