ಕುಕನೂರು: ಸಮೀಪದ ಬೆಣಕಲ್ ಗ್ರಾಮದ ಮೂರನೇ ವಾರ್ಡ್ನಲ್ಲಿ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಎದುರಾಗಿದ್ದರೂ ಪಿಡಿಒ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಗ್ರಾಮದ ಮಹಿಳೆಯರು ಶನಿವಾರ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.
ದಾನಮ್ಮ ಜವಳಿ ಮಾತನಾಡಿ, ವಾರ್ಡ್ನಲ್ಲಿ ನೀರಿನ ಸಮಸ್ಯೆ ವಿಪರೀತ ತಲೆದೋರಿದೆ. ದೂರದ ತೋಟದ ಬಾವಿಗಳಿಗೆ ಅಲೆಯಬೇಕಾಗಿದೆ. ಮಕ್ಕಳು ಶಾಲೆ ಬಿಟ್ಟು ನಿತ್ಯ ನೀರು ತರುವಂತಾಗಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಪೆಟ್ಟು ಬಿದ್ದಂತಾಗಿದೆ. ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಎದುರಾದರೂ ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ವಾರ್ಡ್ ಜನತೆ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ನೀರು ತರುತ್ತಾ ಕುಳಿತರೆ ಕೂಲಿಗೆ ಹೋಗುವುದಕ್ಕೆ ಆಗುವುದಿಲ್ಲ. ಶೀಘ್ರದಲ್ಲಿ ಸಮರ್ಪಕ ಕುಡಿವ ನೀರು ಪೂರೈಕೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡಬೇಕು. ಇಲ್ಲದಿದ್ದರೆ ತಾಲ್ಲೂಕು ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಪ್ರತಿಭಟನಾ ನಿರತರು ಎಚ್ಚರಿಸಿದ್ದಾರೆ.
ಅನ್ನಮ್ಮ ಕಲ್ಮಠ, ವರದಮ್ಮ ಬನ್ನಿಮಠ, ರೇಣಮ್ಮ ಕಂಡಿ, ಈರಮ್ಮ ಕುಂಬಾರ, ಹನುಮವ್ವ ಸಂಗನಾಳ, ಲಲಿತಮ್ಮ ಯರಡರೊಟ್ಟಿ, ಪರಶುರಾಮ ಯರಡರೊಟ್ಟಿ, ಹನುಮವ್ವ ಹೊಟ್ಟಿ, ಸುಶೀಲಮ್ಮ ಕವಲೂರು, ನೀಲಮ್ಮ ಕಮ್ಮಾರ, ಹನುಮಮ್ಮ ಇದ್ದರು.