ಮಂಡ್ಯ: ವಿಜಯಪುರ ಜಿಲ್ಲೆಯ ನಿಡೋಣಿ ಗ್ರಾಮದಲ್ಲಿ ಬಸವಣ್ಣನವರ ಪ್ರತಿಮೆಗೆ ಅಪಮಾನ ಮಾಡಿರುವುದನ್ನು ವಿರೋಧಿಸಿ ಹಾಗೂ ‘ಅಲ್ಲಮ’ ಕನ್ನಡ ಸಿನಿಮಾದಲ್ಲಿ ಅಲ್ಲಮ ಪ್ರಭು ಅವರ ವಚನಕ್ಕೆ ಧಕ್ಕೆ ತರುವ ರೀತಿ ನಡೆದುಕೊಳ್ಳಲಾಗಿದೆ ಎಂದು ಆರೋಪಿಸಿ ವೀರಶೈವ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ಮಾಡಿದರು.
ಸಮಾಜಕ್ಕೆ ಶ್ರೇಷ್ಠ ಸಂದೇಶ ಸಾರಿದ ಹಾಗೂ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಿದ್ದ ಬಸವಣ್ಣನವರ ಪ್ರತಿಮೆಗೆ ವಿಜಯಪುರ ಜಿಲ್ಲೆಯ ನಿಡೋಣಿ ಎಂಬ ಗ್ರಾಮದಲ್ಲಿ ಅಪಮಾನ ಮಾಡಿರುವುದು ಖಂಡನೀಯ. ಅಪಮಾನ ಮಾಡಿದವ ರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
‘ಅಲ್ಲಮ’ ಕನ್ನಡ ಸಿನಿಮಾದಲ್ಲಿ ಅಲ್ಲಮ ಪ್ರಭು ಅವರ ವಚನಗಳನ್ನು ತಿರುಚುವ ಮೂಲಕ ಶರಣರ ಧಾರ್ಮಿಕ ತೆಗೆ ಧಕ್ಕೆ ತರುವಂತೆ ನಡೆದುಕೊಂಡಿ ರುವುದು ಎದ್ದು ಕಾಣುತ್ತದೆ. ರಾಜ್ಯ ಹಾಗೂ ಕೆಂದ್ರ ಸರ್ಕಾರ ಶರಣರ ತತ್ವ ಹಾಗೂ ವಚನಗಳನ್ನು ಉಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯುವ ಜನರನ್ನು ದಿಕ್ಕು ತಪ್ಪಿಸುವ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿವೆ. ಅಂತಹ ಸಂದೇಶಗಳನ್ನು ಸಮಾಜಕ್ಕೆ ನೀಡುವ ಮಂದಿಗೆ ಕಡಿವಾಣ ಹಾಕುವುದು ಅವಶ್ಯವಾಗಿದೆ. ಶರಣರ ಭಕ್ತಿ ಭಾವಕ್ಕೆ ಧಕ್ಕೆ ತರುವಂತ ಕೆಲಸಗಳನ್ನು ಯಾರೂ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕರಾದ ಚಂದ್ರಶೇಖ ರಪ್ಪ, ಎಚ್.ಸಿ. ಬಸವರಾಜು, ಮಡಿಕೇರಿ ಜಿ.ಪಂ. ಸದಸ್ಯೆ ಕುಮುದಾ, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಗುರುಪ್ರಸಾದ್, ಮಲ್ಲಿಕಾರ್ಜುನಯ್ಯ, ಆನಂದಪ್ಪ ಭಾಗವಹಿಸಿದ್ದರು.