ಚನ್ನರಾಯಪಟ್ಟಣ: ಶನಿವಾರ ಸಂಜೆ ಆಗಸದಲ್ಲಿ ಸೂರ್ಯ ಮರೆಯಾಗು ತ್ತಿದ್ದಂತೆ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ವಿದ್ಯುದ್ದೀಪಗಳಿಂದ ಅಲಂಕಾರಗೊಂಡ ವೇದಿಕೆಯಲ್ಲಿ ಪ್ರದರ್ಶನವಾದ ನೃತ್ಯ ಪ್ರಕಾರಗಳು ನೋಡುಗರ ಕಣ್ಮನ ಸೆಳೆಯಿತು. ಸಾವಿರಾರು ಪ್ರೇಕ್ಷಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಚನ್ನರಾಯ ಪಟ್ಟಣದಲ್ಲಿ ಆಯೋಜಿಸಿದ್ದ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವ ವಿವಿಧತೆಯಲ್ಲಿ ಏಕತೆ ಸಾರುವ ದೇಸಿ ಸೊಬಗಿನ ನೃತ್ಯ ವೈಭವ ಗಮನಸೆಳೆಯಿತು.
ಮೋಹಿನಿಯಾಟ್ಟಂ, ಬಡಗತಿಟ್ಟು ಯಕ್ಷಗಾನ, ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಚರ್ಮವಾದ್ಯ, ಶ್ರೀಲಂಕಾದ ನೃತ್ಯ ವೈಭವ, ಒಡಿಶಾದ ಗೋಟಿಪೂವ, ಯೋಗನೃತ್ಯ, ಆನಂದತಾಂಡವ, ಭರತನಾಟ್ಯ, ಗುಜರಾತಿನ ಹುಡೋರಾಸ್, ಮಲ್ಲಕಂಭ ಪ್ರದರ್ಶನ, ಕಥಕ್, ಮಹಾರಾಷ್ಟ್ರದ ಲಾವಣಿ ನೃತ್ಯ, ಸಿಂಹನೃತ್ಯ, ತೆಂಕುತಿಟ್ಟು ಯಕ್ಷಗಾನ ನೃತ್ಯ ಪ್ರಕಾರಗಳು ವೇದಿಕೆಯಲ್ಲಿ ಪ್ರದರ್ಶನಗೊಂಡವು.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶನಿವಾರ ಮೂರುವರೆ ತಾಸು ನಡೆಸಿಕೊಟ್ಟ ನೃತ್ಯ ಕಲರವ ದೇಸಿ ಸಂಸ್ಕೃತಿಯನ್ನು ಬಿಂಬಿಸಿತು. ಶ್ರೀಲಂಕಾ ಸೇರಿ ಭಾರತದ ಬಹುಮುಖಿ ಸಂಸ್ಕೃತಿಯನ್ನು ಅನಾವರಣಗೊಳಿಸಿತು. ಒಂದೊಂದು ನೃತ್ಯ ಮುಗಿಯುತ್ತಿದ್ದಂತೆ ಸಾವಿರಾರು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಇದಕ್ಕೂ ಮುನ್ನ ಆಯೋಜಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ದೇಶದ ಪರಂಪರೆ, ಸಂಸ್ಕೃತಿ ಉಳಿಸುವುದು ಎಲ್ಲರ ಜವಬ್ದಾರಿ. ದೇಶದ ಸಂಸ್ಕೃತಿ ಮರೆತರೆ ನಮ್ಮನ್ನು ನಾವು ಮರೆತಂತೆ. ದೇಶದ ಸಂಸ್ಕೃತಿ ಬಿಂಬಿಸುವ ಆಳ್ವಾಸ್ ನುಡಿಸಿರಿ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಇದುವರೆಗೆ ಎರಡು ಬಾರಿ ಆಯೋಜಿಸಲಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ್ ಆಳ್ವ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ದೇಶದ ಪರಂಪರೆಯನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ವಿವಿಧ ನೃತ್ಯ ಪ್ರಕಾರದ ತರಬೇತಿ ನೀಡಲಾಗಿದೆ. ದೇಶ, ವಿದೇಶದಲ್ಲಿ ಪ್ರದರ್ಶನ ನೀಡಲಾಗಿದೆ. 23 ವರ್ಷದಿಂದ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಪುರಸಭಾಧ್ಯಕ್ಷ ಕೆ.ಜೆ.ಸುರೇಶ್, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಶಿವನಂಜೇಗೌಡ ಮಾತನಾಡಿದರು.
ಪರಿಸರವಾದಿ ಸಿ.ಎನ್.ಅಶೋಕ್ ಇದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಸುಮಾ ಬಾಲಕೃಷ್ಣ ಮಾತನಾಡಿದರು.
**
ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ದೇಶದ ಪರಂಪರೆಯನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ವಿವಿಧ ನೃತ್ಯ ಪ್ರಕಾರದ ತರಬೇತಿ ನೀಡಿ ದೇಶ, ವಿದೇಶದಲ್ಲಿ ಪ್ರದರ್ಶನ ನೀಡಲಾಗಿದೆ
-ಮೋಹನ್ ಆಳ್ವ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ