ಹುಬ್ಬಳ್ಳಿ: ‘ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಎಂಬ ಭೇದ ಸಲ್ಲದು. ರಾಜ್ಯದ ಒಟ್ಟಾರೆ ಅಭಿವೃದ್ಧಿಗಾಗಿ ಚಿಂತನೆ ನಡೆಯಬೇಕು’ ಎಂದು ಜೆ.ಡಿ.ಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸಲಹೆ ನೀಡಿದರು.
ಡಾ.ಪಾಟೀಲ ಪುಟ್ಟಪ್ಪ ವಿಚಾರ ವೇದಿಕೆ ಹಾಗೂ ಅವ್ವ ಸೇವಾ ಟ್ರಸ್ಟ್ ವತಿಯಿಂದ ನಗರದ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಪಾಪು–98’ ಅಭಿವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜಕಾರಣಿಗಳು ಈ ಭಾಗದ ಅಭಿವೃದ್ಧಿಗಾಗಿ ಏನೂ ಮಾಡಲಿಲ್ಲ ಎಂಬ ಭಾವನೆ ಇಲ್ಲಿನ ಹೋರಾಟಗಾರರು ಮತ್ತು ಕೆಲ ಮಠಾಧೀಶರಲ್ಲಿ ಇದೆ. ಇದು ಸರಿಯಲ್ಲ. ಅನೇಕ ಹಿರಿಯರು ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ತಾರತಮ್ಯದ ಮಾತುಗಳನ್ನು ಆಡಿ ಅವರಿಗೆ ನೋವು ತರುವುದು ಬೇಡ’ ಎಂದರು.
‘ಕಾವೇರಿ ನದಿ ನೀರಿಗೆ ಸಂಬಂಧಿಸಿ ನಾನು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಕ್ಕೆ ವಿಶೇಷ ಕಾರಣವಿದೆ. ಮಹಾದಾಯಿ ವಿಷಯದಲ್ಲೂ ಸಂದರ್ಭ ಬಂದಾಗ ಹೋರಾಟಕ್ಕೆ ಇಳಿಯುತ್ತೇನೆ’ ಎಂದು ದೇವೇಗೌಡ ಹೇಳಿದರು.
ದೆವ್ವವಾಗಿ ಕಾಡುತ್ತೇನೆ: ಸನ್ಮಾನ ಸ್ವೀಕರಿಸಿದ ಪಾಟೀಲ ಪುಟ್ಟಪ್ಪ, ‘ನನಗೆ ವಯಸ್ಸಾಗುತ್ತಿದ್ದಂತೆಯೇ ಅನ್ಯಾಯ ಮಾಡುವ ಕೆಲವರಿಗೆ ಖುಷಿಯಾಗುತ್ತಿದೆ. ಆದರೆ ಅನ್ಯಾಯದಲ್ಲಿ ತೊಡಗುವವರನ್ನು ದೆವ್ವವಾಗಿ ಕಾಡುತ್ತೇನೆ ಹುಷಾರ್!’ ಎಂದು ಹೇಳಿ ನಗೆಯುಕ್ಕಿಸಿದರು.
ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿಗಳಾದ ಹಂ.ಪ. ನಾಗರಾಜಯ್ಯ ಹಾಗೂ ಶಾಂತಿನಾಥ ದಿಬ್ಬದ ಅಭಿನಂದನಾ ನುಡಿಗಳನ್ನಾಡಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇದ್ದರು.