ಧಾರವಾಡ: ‘ಹಿಂದಿಗಿಂತ ಇಂದು ಜ್ಞಾನದ ಶಾಖೆಗಳು ಹೆಚ್ಚುತ್ತಿವೆ. ಆದರೆ ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಸಮತೋಲನದ ಕೊರತೆಯಿಂದಾಗಿ ಅವು ಮೂಲಶಕ್ತಿಯನ್ನು ಕಳೆದುಕೊಳ್ಳುತ್ತಿವೆ’ ಎಂದು ಪ್ರೊ.ಮೋಹನ ಸಿದ್ಧಾಂತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಸಾಧನಕೇರಿ ಚೈತ್ರ ಸಭಾಂಗಣದಲ್ಲಿ ಅನ್ವೇಷಣ ಕೂಟ ಹಮ್ಮಿಕೊಂಡಿದ್ದ ‘ಬದಲಾಗುತ್ತಿರುವ ಶಿಕ್ಷಣ ಮತ್ತು ಪದ್ಧತಿಗಳು’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕಲಿಸುವ ಪಾಠಗಳ ಕುರಿತು ಶಿಕ್ಷಕರ ಬದ್ಧತೆಯ ಕೊರತೆ, ಮಕ್ಕಳ ಮೇಲಿನ ಪಾಲಕರ ಮಿತಿಮೀರಿದ ವ್ಯಾಮೋಹ, ಮತ್ತು ಆಧುನಿಕ ವಿಜ್ಞಾನದ ಆವಿಷ್ಕಾರಗಳಾದ ಮೊಬೈಲ್, ಕಂಪ್ಯೂಟರ್ಗಳು ವಿದ್ಯೆಯ ಮೂಲ ಸಲಕರಣೆಗಳಾಗುತ್ತಿರುವುದು ಶಿಕ್ಷಣದ ಮಹತ್ವವನ್ನು ಕಡಿಮೆಗೊಳಿಸುತ್ತಿವೆ’ ಎಂದರು.
‘ಮೂಲ ಕರ್ತವ್ಯವನ್ನು ಮರೆತು ಕೇವಲ ಹಕ್ಕಿಗಾಗಿಯೇ ಹೋರಾಡುತ್ತಿರುವ ಶಿಕ್ಷಕರು, ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾದರಿಗಳು ಶಿಥಿಲವಾಗುತ್ತಿರುವುದು, ಇಂಗ್ಲಿಷ ಮಾಧ್ಯಮದ ಎಳೆ ಮಕ್ಕಳ ಮೇಲೆ ಹೇರುವ ಹೋಂ ವರ್ಕ್ ಹುನ್ನಾರ ಇತ್ಯಾದಿಗಳು ಖಚಿತ ನಿಲುಗಡೆಗೆ ಬಂದಾಗ ಇಂದು ಶಿಕ್ಷಣ ರಂಗದಲ್ಲಿ ಕಳೆದು ಹೋಗುತ್ತಿರುವ ಮೌಲ್ಯಗಳು ಮತ್ತೊಮ್ಮೆ ಪುನರುತ್ಥಾನ ಹೊಂದಬಹುದು ಎಂದು ಹೇಳಿದರು.
ಡಾ.ವಿ.ಟಿ.ನಾಯಕ ಮಾತನಾಡಿ, ‘ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಹಂತದಲ್ಲಿ ಮಕ್ಕಳ ಮೂಲ ಆಸಕ್ತಿಗಳನ್ನು ಕಂಡು ಹಿಡಿದು ಅವರಿಗೆ ಭವಿಷ್ಯದ ಸರಿಯಾದ ಮಾರ್ಗ ತೋರಿಸುವುದೇ ಶಿಕ್ಷಕನಾದವನ ಮೊದಲ ಕರ್ತವ್ಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ನರಸಿಂಹ ಪರಾಂಜಪೆ, ಶ್ರೀನಿವಾಸ ವಾಡಪ್ಪಿ, ಹರ್ಷ ಡಂಬಳ, ಪ್ರೊ.ಸಿ.ವಿ.ವೇಣುಗೋಪಾಲ, ಪ್ರೊ.ಎ.ಜಿ.ಸಬರದ, ಪ್ರೊ.ದುಷ್ಯಂತ ನಾಡಗೌಡ, ಡಾ. ಗೋವಿಂದರಾಜ ತಳಕೋಡ, ಎಂ.ಆರ್.ಬಾಳೀಕಾಯಿ, ಎಸ್.ಎಲ್.ಕುಲಕರ್ಣಿ, ಮತ್ತಿತರರು ಪಾಲ್ಗೊಂಡಿದ್ದರು.