ದಾವಣಗೆರೆ: ಖಾಲಿ ನಿವೇಶನಗಳಲ್ಲಿ ತಲೆ ಎತ್ತಿರುವ ಜಾಲಿ ಗಿಡಗಳ ಕುರುಚಲು ಕಾಡು; ಅಲ್ಲಲ್ಲಿ ಕಿತ್ತು ಹೋಗಿರುವ ಡಾಂಬರು ರಸ್ತೆಗಳು; ಅಭಿವೃದ್ಧಿ ಕಾಣದ ಬಡಾವಣೆಗಳ ಒಳ ರಸ್ತೆಗಳು; ಕಾಂಕ್ರೀಟ್ ಭಾಗ್ಯ ಕಂಡ ಕೆಲ ಮುಖ್ಯ ರಸ್ತೆಗಳು ಮತ್ತು ಕಾಂಕ್ರೀಟ್ ಮೆತ್ತಿಕೊಳ್ಳಲು ಸಜ್ಜಾಗಿರುವ ಒಂದೆರಡು ರಸ್ತೆಗಳು; ಬೇಸಿಗೆಯ ಮುನ್ನವೇ ಕುಡಿವ ನೀರಿನ ಸಮಸ್ಯೆಯ ಬಿಸಿ ಮುಟ್ಟಿಸಿಕೊಂಡ ಬಡಾವಣೆಗಳ ನಿವಾಸಿಗಳು...
ಇವು ನಗರದ 36ನೇ ವಾರ್ಡ್ನಲ್ಲಿ ಸಂಚರಿಸಿದಾಗ ಕಂಡು ಬಂದ ದೃಶ್ಯಾವಳಿಗಳು. ಭೌಗೋಳಿಕವಾಗಿ ದೊಡ್ಡದಾಗಿರುವ ಈ ವಾರ್ಡ್ನ ಬಡಾವಣೆಗಳಲ್ಲಿ ಕೆಲವು
ಮುಖ್ಯ ರಸ್ತೆಗಳ ಸುಧಾರಣೆ, ಉದ್ಯಾನಗಳ ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ, ಇನ್ನೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿವೆ.
ಜಾಲಿಗಿಡಗಳ ಉದ್ಯಾನ: ಶಿವಕುಮಾರ ಸ್ವಾಮಿ ಬಡಾವಣೆ, ಸರಸ್ವತಿ ಬಡಾವಣೆ, ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆಗಳಲ್ಲಿ ಹಲವು ಖಾಲಿ ನಿವೇಶನಗಳಿವೆ. ಅವುಗಳಲ್ಲಿ ಆಳೆತ್ತರಕ್ಕೆ ಜಾಲಿಗಿಡಗಳು ಬೆಳೆದಿದ್ದು, ಕುರುಚಲು ಕಾಡಿನಂತೆ ಕಂಡುಬರುತ್ತಿದೆ.
‘ಖಾಲಿ ನಿವೇಶನಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸದೇ ಇರುವುದರಿಂದ ಗಿಡಗಂಟಿಗಳು ಬೆಳೆದಿವೆ. ಅಲ್ಲಿ ಜಾಲಿ ಗಿಡಗಳ ಉದ್ಯಾನ ನಿರ್ಮಿಸಿದಂತೆ ಕಂಡು ಬರುತ್ತಿದ್ದು, ಹಂದಿಗಳ ಆವಾಸ ಸ್ಥಳವಾಗಿ ಮಾರ್ಪಟ್ಟಿದೆ. ಪಾಲಿಕೆಯ ಪೌರ ಕಾರ್ಮಿಕರು ಹಣ ಕೇಳುತ್ತಾರೆ ಎಂಬ ಕಾರಣಕ್ಕೆ ಕೆಲವರು ಕಸವನ್ನು ಖಾಲಿ ನಿವೇಶನಗಳಿಗೆ ತಂದು ಸುರಿಯುತ್ತಿದ್ದಾರೆ. ಸ್ಥಳೀಯರ ಆರೋಗ್ಯದ ದೃಷ್ಟಿಯಿಂದ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಡುವಂತೆ ಕಟ್ಟು ನಿಟ್ಟಿನ ಕ್ರಮವನ್ನು ಪಾಲಿಕೆ ಕೈಗೊಳ್ಳಬೇಕು’ ಎನ್ನುತ್ತಾರೆ ಶಿವಕುಮಾರಸ್ವಾಮಿ ಬಡಾವಣೆಯ 8ನೇ ಕ್ರಾಸ್ನ ‘ಸಿ’ ಮುಖ್ಯ ರಸ್ತೆಯ ನಿವಾಸಿ ಮಹಾದೇವಪ್ಪ.
‘ಬಡಾವಣೆಯ ಒಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಲ್ಲ. ಬಹುತೇಕ ಎಲ್ಲ ಒಳ ರಸ್ತೆಗಳು ಕಚ್ಚಾ ರಸ್ತೆಗಳಾಗಿದ್ದು, ಮನೆಯೊಳಗೆ ದೂಳು ಬರುತ್ತಿದೆ. ಒಳ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಆದ್ಯತೆ ನೀಡಬೇಕು’ ಎಂದು ವಿನಾಯಕನಗರದ ನಿವಾಸಿ ಶಂಕರಪ್ಪ ಒತ್ತಾಯಿಸುತ್ತಾರೆ.
‘ಮೊದಲು ಎರಡು– ಮೂರು ದಿನಗಳಿಗೆ ಕುಡಿಯುವ ನೀರು ಬಿಡುತ್ತಿದ್ದರು. ಈಗ ವಾರಕ್ಕೆ ಒಮ್ಮೆ ನೀರು ಕೊಡುತ್ತಿದ್ದಾರೆ. ಕೊಳವೆ ಬಾವಿಗಳಲ್ಲೂ ನೀರಿನ ಮಟ್ಟ ಕುಸಿದಿದೆ. ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ’ ಎಂದೂ ಅವರು ಅಳಲು ತೋಡಿಕೊಂಡರು.
ಮಾರ್ಗಸೂಚಿ ಫಲಕವೇ ಇಲ್ಲ: ‘ನಮ್ಮ ಬಡಾವಣೆಯಲ್ಲಿ ಒಳ ರಸ್ತೆಗಳು ಸುಸ್ಥಿತಿಯಲ್ಲಿಲ್ಲ. ಒಳಚರಂಡಿ ಸೌಲಭ್ಯವೂ ಸಮರ್ಪಕವಾಗಿಲ್ಲ. ಅಲ್ಲದೇ ರಸ್ತೆಗಳಿಗೆ ಮಾರ್ಗಸೂಚಿ ಫಲಕವನ್ನೂ ಸರಿಯಾಗಿ ಹಾಕಿಲ್ಲ. ಹೀಗಾಗಿ ಹೊರಗಿನಿಂದ ಬರುವ ಜನರಿಗೆ ಮನೆಯ ವಿಳಾಸ ಹುಡುಕುವುದು ಕಷ್ಟವಾಗುತ್ತಿದೆ. ನಾವೇ ಮುಖ್ಯ ರಸ್ತೆಗೆ ಹೋಗಿ ಕರೆದುಕೊಂಡು ಬರುತ್ತಿದ್ದೇವೆ’ ಎನ್ನುತ್ತಾರೆ ಸರಸ್ವತಿ ಬಡಾವಣೆಯ ಸಿ ಬ್ಲಾಕ್ ನಿವಾಸಿ ಹಾಲಪ್ಪ.
‘ವಾರದಲ್ಲಿ ಒಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಅದೂ ಒಂದೆರಡು ಗಂಟೆ ಮಾತ್ರ. ಕೊಳವೆಬಾವಿಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ’ ಎಂದು ಹಾಲಪ್ಪ ಧ್ವನಿಗೂಡಿಸಿದರು.
ಈ ವಾರ್ಡ್ನ ಬಡಾವಣೆಗಳಲ್ಲಿ ಕೆಲವೆಡೆ ನಿತ್ಯ ಹಾಗೂ ಕೆಲವೆಡೆ ಎರಡು ದಿನಗಳಿಗೆ ಒಮ್ಮೆ ಮನೆ ಮನೆಯಿಂದ ಕಸವನ್ನು ಸಂಗ್ರಹಿಸಲಾಗುತ್ತಿದೆ. ಸ್ವಲ್ಪ ಮಟ್ಟಿಗೆ ಬಡಾವಣೆಗಳು ಸ್ವಚ್ಛವಾಗಿರುವಂತೆ ಕಂಡರೂ ಅಲ್ಲಲ್ಲಿ ರಸ್ತೆ ಪಕ್ಕ ಕಸ ಎಸೆಯಲಾಗುತ್ತಿದೆ. ಹಂದಿಗಳ ಗುಂಪು ಕಂಡುಬರುತ್ತಿವೆ.