ಬಳ್ಳಾರಿ: ನಗರವು ಸೋಮವಾರ ಸರಣಿ ಪ್ರತಿಭಟನೆಗೆ ಸಾಕ್ಷಿಯಾಯಿತು. ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದವು. ಬೇಡಿಕೆ ದಿನಾಚರಣೆ ಅಂಗವಾಗಿ ಎಐಟಿಯುಸಿ ನೇತೃತ್ವದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ನ ಕಾರ್ಯಕರ್ತೆಯರು ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ, ಎಚ್.ಆರ್.ಗವಿಯಪ್ಪ ವೃತ್ತ, ರೈಲು ನಿಲ್ದಾಣ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಕೈಗೊಂಡರು. ಮೆರವಣಿಗೆಯುದ್ಧಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಎಐಟಿಯುಸಿ ಜಿಲ್ಲಾ ಸಮಿತಿ: ಹತ್ತುವರ್ಷದ ಸೇವಾ ಹಿರಿತನ ಹೊಂದಿರುವ ಕಾರ್ಯಕರ್ತೆಯರ, ಸಹಾಯಕಿಯರನ್ನು ಸಿ ಮತ್ತು ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು. ಅರ್ಹರಿಗೆ ಕಾರ್ಯಕರ್ತೆ, ಮೇಲ್ವಿಚಾರಕಿ ಹುದ್ದೆಗಳಿಗೆ ನೇರ ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕಾರ್ಯಕರ್ತೆಯರಿಗೆ ₹ 18,000 ಮತ್ತು ಸಹಾಯಕಿಯರಿಗೆ ₹ 10,000 ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಸಂಘಟನೆ ಮುಖಂಡ ಎ.ಆರ್.ಎಂ.ಇಸ್ಮಾಯಿಲ್ ಆಗ್ರಹಿಸಿದರು.
ನಿವೃತ್ತಿ ವೇತನ ₹ 3,000 ನೀಡಬೇಕು. ಇಡಿಗಂಟು ಮೊತ್ತವು ತಲಾ ₹ 3 ಮತ್ತು 2ಲಕ್ಷ ಅನುದಾನ ನಿಗದಿಪಡಿಸಬೇಕು. ಸೇವಾ ಹಿರಿತನ ಆಧರಿಸಿ ವೇತನ ಪರಿಷ್ಕರಣೆ, ವಾರ್ಷಿಕ ವೇತನ ಪರಿಷ್ಕರಣೆ ಜಾರಿಯಾಗಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಎಚ್.ಕೆ.ರಾಮಚಂದ್ರಪ್ಪ, ಎಚ್.ಎ.ಆದಿಮೂರ್ತಿ, ಎಚ್.ವೀರಣ್ಣ, ಅರ್ಕಾಣಿ, ಈ ಮಂಗಮ್ಮ, ಕಟ್ಟೆಬಸಪ್ಪ, ಶೇಖರಬಾಬು ಇದ್ದರು.
ಸಮಾನತೆ ಯೂನಿಯನ್ ಕರ್ನಾಟಕ: ಗುತ್ತಿಗೆ ಆಧರಿತ ಪೌರಕಾರ್ಮಿಕರ ಹಾಗೂ ಚಾಲಕರ ಬಾಕಿ ವೇತನವನ್ನು ಶೀಘ್ರವೇ ಪಾವತಿಸಬೇಕು ಎಂದು ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಸಂಘಟನೆಯ ಸದಸ್ಯರು ಪ್ರತಿಭಟಸಿದರು.
ಕಳೆದ ನಾಲ್ಕು ತಿಂಗಳಿಂದ ಅಂದಾಜು 574 ಪೌರಕಾರ್ಮಿಕರ, ಚಾಲಕರ ವೇತನವು ಪಾವತಿಯಾಗಿಲ್ಲ. ಪಾಲಿಕೆ ಆಯುಕ್ತರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಸಮರ್ಪಕ ವೇತನವಿಲ್ಲದೆ, ಕಾರ್ಮಿಕರು ಬೀದಿ ಪಾಲಾಗಿ ದ್ದಾರೆ. ಕೂಡಲೇ ಬಾಕಿ ಉಳಿಸಿಕೊಂಡಿರುವ ವೇತನವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು. ಬಳಿಕ ಉಪಮೇಯರ್ ಬೆಣಕಲ್ ಬಸವರಾಜ ಅವರಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು. ಸಂಘಟನೆಯ ಪದಾಧಿಕಾರಿಗಳಾದ ಅಮರನಾಥ, ಕಾಳಿಪ್ರಸಾದ, ರತ್ನಮ್ಮ, ರಾಮಚಂದ್ರ ಇದ್ದರು.