ಕೆ.ಆರ್.ಪೇಟೆ: ‘ಶಿಕ್ಷಕರು ಸಮುದಾ ಯದ ವಿಶ್ವಾಸವನ್ನು ಗಳಿಸಿದಾಗ ಮಾತ್ರ ಸರ್ಕಾರಿ ಶಾಲೆಯ ಅಭಿವೃದ್ಧಿ ಸಾಧ್ಯ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ ಹೇಳಿದರು.
ಅವರು ಸೋಮವಾರ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕೊಡಗಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಾ.ಪಂ ಸದಸ್ಯ ಬಿ.ಎನ್.ದಿನೇಶ್ ಹಾಗೂ ಚಿತ್ರನಟ ರವಿಶಂಕರ್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯೋಗೇಶ್ ಅವರು ಕೊಡುಗೆಯಾಗಿ ನೀಡಿದ ಕಂಪ್ಯೂಟರ್, ಪ್ರಿಂಟರ್, ಯುಪಿಎಸ್ ಮತ್ತು ಬ್ಯಾಟರಿ ಯನ್ನು ಸ್ವೀಕರಿಸಿ ಮಾತನಾಡಿದರು.
ಕೊಡಗಹಳ್ಳಿ ಶಾಲೆ ಇಡೀ ಜಿಲ್ಲೆಗೆ ಮಾದರಿಯಾಗಿದೆ. ಅಲ್ಲದೆ ಈ ಊರಿನ ಯಾವುದೇ ಮಗು ಖಾಸಗಿ ಶಾಲೆಗೆ ಹೋಗದಂತೆ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಈ ಬಗ್ಗೆ ಪ್ರಜಾವಾಣಿ ‘ಮೂಲ ಸೌಕರ್ಯಗಳ ಬಗ್ಗೆ ನೆರವು ಅಗತ್ಯ’ ಎಂದು ಸಚಿತ್ರ ಲೇಖನ ಪ್ರಕಟಿ ಸಿತ್ತು. ಆ ವರದಿಯ ಪರಿಣಾಮವಾಗಿ ಶಾಲೆಗೆ ದಾನಿಗಳ ನೆರವು ಹರಿದು ಬರುತ್ತಿದೆ. ಡಿಜಿಟಲ್ ಕ್ರಾಂತಿಯ ಈ ದಿನಗಳಲ್ಲಿ ಇಲ್ಲಿಯ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಶಿಕ್ಷಕರು ದಾನಿಗಳ ನೆರವನ್ನು ಪಡೆದು ಶ್ರಮಿಸುತ್ತಿ ರುವುದು ಶ್ಲಾಘನೀಯ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ನಾಗರಾಜು, ಚಿತ್ರನಟ ರವಿಶಂಕರ್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯೋಗೇಶ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ದೇವರಾಜು, ಸಂತೇಬಾಚಹಳ್ಳಿ ಕ್ಲಸ್ಟರ್ ನ ಸಿ.ಆರ್.ಸಿ. ಮಾರೇನಹಳ್ಳಿ ಲೋಕೇಶ್ , ಹೋಬಳಿ ಶಿಕ್ಷಣಾಧಿಕಾರಿ ಇಸಿಒ ನಂಜಪ್ಪ, ಮುಖ್ಯ ಶಿಕ್ಷಕ ಸತೀಶ್, ಶಿಕ್ಷಕಿ ರಾಧಾ ಹಾಗೂ ಗ್ರಾಮದ ಮುಖಂಡರು ಇದ್ದರು.