ಮಾಗಡಿ: ತಾಲ್ಲೂಕಿನ ಸುಗ್ಗನಹಳ್ಳಿ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.18ರಿಂದ 23 ರವರೆಗೆ ದನಗಳ ಬೃಹತ್ ಜಾತ್ರೆ ನಡೆಯಲಿದೆ.
ಜಾತ್ರೆಗೆ ಬರುವ ರೈತರಿಗೆ ಬೇಕಾದ ಅನುಕೂಲಗಳನ್ನು ಕಲ್ಪಿಸಿಕೊಡಲು ಕಂದಾಯ, ಲೋಕೋಪಯೋಗಿ, ಪಶುಪಾಲನ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಪುರಸಭೆಯಲ್ಲಿ ನಡೆದ ಸುಗ್ಗನಹಳ್ಳಿ ಜಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಕಾಣಿಸಿಕೊಂಡಿರುವ ಕಾಲುಬಾಯಿ ಜ್ವರದಿಂದ ರಾಸುಗಳಿಗೆ ತೊಂದರೆಯಾಗಬಹುದು. ಈ ರಾಸುಗಳ ಜಾತ್ರೆ ರದ್ದುಪಡಿಸುವಂತೆ ಪಶುಪಾಲನಾ ಇಲಾಖೆಯ ಅಧಿಕಾರಿ ಡಾ.ನಾರಾಯಣ ಸ್ವಾಮಿ ತಿಳಿಸಿದರು.
ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ರಾಸುಗಳ ಜಾತ್ರೆ ಯಾವುದೇ ಕಾರಣಕ್ಕೂ ನಿಲ್ಲಿಸುವುದು ಬೇಡ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಮಂಜುನಾಥ, ಟಿಎಪಿಎಂಎಸ್ ಉಪಾಧ್ಯಕ್ಷ ಎಸ್.ಎ.ಕುಮಾರಯ್ಯ ಇತರರು ಒತ್ತಾಯಿಸಿದರು. ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಜಾತ್ರೆಗೆ ಬರುವ ರಾಸುಗಳಿಗೆ ಕಡ್ಡಾಯವಾಗಿ ಚುಚ್ಚುಮದ್ದು ಹಾಕಿ ಜಾತ್ರೆಯ ಒಳಗೆ ಸೇರಿಸಬೇಕು. ವೈದ್ಯರೊಂದಿಗೆ ಇತರೆ ಇಲಾಖೆಯ ಅಧಿಕಾರಿಗಳು ಸಹಕರಿಸಿ, ರೈತರಿಗೆ ತಿಳಿವಳಿಕೆ ನೀಡಿ ಚುಚ್ಚುಮದ್ದು ನೀಡಬೇಕು. ರಾಸುಗಳ ಜಾತ್ರೆ ನಿಲ್ಲಿಸುವುದು ಬೇಡ ಎಂದರು.
ಮುಜರಾಯಿ ಇಲಾಖೆ ವತಿಯಿಂದ ದೇವಾಲಯದ ಸುತ್ತಲಿನ ಜಾತ್ರೆ ಬಯಲಿನಲ್ಲಿ ಇರುವ ನೀರಿನ ತೊಟ್ಟಿ ದುರಸ್ತಿ ಪಡಿಸಿ, ಟ್ಯಾಂಕರ್ಗಳ ಮೂಲಕ ನೀರು ತುಂಬಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಹಶೀಲ್ದಾರ್ ಎನ್.ಲಕ್ಷ್ಮೀಚಂದ್ರ ತಿಳಿಸಿದರು.