ಗದಗ: ಮುಂಡರಗಿ ತಾಲ್ಲೂಕಿನ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಬೇಕು, ಕಪ್ಪತಗುಡ್ಡಕ್ಕೆ ನೀಡಿದ್ದ ಸಂರಕ್ಷಿತ ಮೀಸಲು ಅರಣ್ಯ ಸ್ಥಾನಮಾನ ಮುಂದುವರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನೂರಾರು ರೈತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸ್ಥಳೀಯ ಕಿತ್ತೂರು ಚನ್ನಮ್ಮ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಜಿಲ್ಲಾಡಳಿತ ಭವನದ ಮುಖ್ಯದ್ವಾರ ಎದುರು ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮುಂಡರಗಿ ತಾಲ್ಲೂಕಿನ ಚಿಕ್ಕವಡ್ಡಟ್ಟಿ, ಕೆಲೂರು, ಮುರಡಿ ಹಾಗೂ ಮುರಡಿ ತಾಂಡಾ, ಗುಡ್ಡದ ಬೂದಿಹಾಳ, ಬಾಗೇವಾಡಿ, ಮಲ್ಲಿಕಾರ್ಜುನಪುರ, ಜಾಲವಾಡಗಿ ಗ್ರಾಮದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿಲ್ಲ. ಹತ್ತು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕರರು ಆರೋಪಿಸಿದರು.
ಮಳೆ ಕೊರತೆಯಿಂದ ಗ್ರಾಮಗಳಲ್ಲಿ ನೀರಿನ ಮೂಲಗಳೇ ಇಲ್ಲದಂತಾಗಿವೆ. ಕೊಳವೆ ಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗುತ್ತಿವೆ. ಕೃಷಿ, ಜನ-, ಜಾನುವಾರುಗಳಿಗೂ ನೀರಿನ ಸಮಸ್ಯೆ ಉಂಟಾಗಿದೆ. ಗ್ರಾಮಗಳ ಕೆಲವರು ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ ಎಂದರು.
ನಂತರ ಆಕ್ರೋಶಗೊಂಡ ರೈತರು ಜಿಲ್ಲಾಡಳಿತ ಭವನ ಮುಂಭಾಗದ ಹೆದ್ದಾರಿ ತಡೆಯಲು ಮುಂದಾದರು. ಆಗ ಪೊಲೀಸರು ರಸ್ತೆ ತಡೆ ನಡೆಸದಂತೆ ರೈತರಿಗೆ ತಿಳಿಸಿದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಹತ್ತು ನಿಮಿಷ ಹೆದ್ದಾರಿ ತಡೆ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜಿ.ಗದ್ಯಾಳ ರೈತ ಮುಖಂಡರನ್ನು ಕರೆಸಿಕೊಂಡು, ಅಹವಾಲು ಆಲಿಸಿದ ಅವರು, ಮುಂಡರಗಿ ತಾಲ್ಲೂಕಿನ ಗ್ರಾಮಗಳ ಕೆರೆಗಳಿಗೆ ನದಿ ನೀರು ತುಂಬಿಸುವ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಅನುದಾನ ಬೇಡಿಕೆ ಒಳಗೊಂಡ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ, ಮಲ್ಲಿಕಾರ್ಜುನ ಹಣಜಿ, ನಾಗಪ್ಪ ವಾರದ, ವಿ.ಬಿ.ಪಾಟೀಲ, ಲೋಕನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಬಸವರಾಜ ತಿಮ್ಮಾಪುರ, ಬಸಣ್ಣ ಬೋಳಗುಂಡಣ್ಣವರ, ನಾಗರಾಜ ಇಟಗಿ ಮತ್ತಿತರರು ಇದ್ದರು.