ಮಾಗಡಿ: ಪ್ರಜೆಗಳೆಲ್ಲರೂ ವೈಯಕ್ತಿಕ ಸ್ವಚ್ಛತೆ ಜೊತೆಗೆ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿಯೊಬ್ಬರ ಮನಸ್ಸು ಮತ್ತು ಮನೆಯ ವಾತಾವರಣ ಸ್ವಚ್ಛವಾಗಿದ್ದಾಗ ರಾಷ್ಟ್ರದ ಸ್ವಚ್ಛತೆಯಾಗಲಿದೆ ಎಂದು ಹಿರಿಯ ಸಿವಿಲ್್ ನ್ಯಾಯಾಧೀಶ ಕೆ.ಮಹದೇವ್ ತಿಳಿಸಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಬುಧವಾರ ನಡೆದ ವಿಷಯಾಧಾರಿತ ಸ್ವಚ್ಛತಾ ಆಂದೋಲನದ ಅಂಗವಾಗಿ ನ್ಯಾಯಾಲಯದ ಮುಂದಿನ ಕಸ ಗುಡಿಸಿ, ಜಾಗೃತಿ ಜಾಥಾ ನಡೆಸಿದ ನಂತರ ಅವರು ಮಾತನಾಡಿದರು.
ಎನ್ನ ಮನದ ಮೈಲಿಗೆಯ ಶುಚಿಗೊಳಿಸಿದಾತ ಮಡಿವಾಳ ಮಾಚಿದೇವ ತಂದೆ ಎಂದ ಬಸವಾದಿ ಶರಣರು 12 ನೇ ಶತಮಾನದಲ್ಲಿಯೇ ಕರ್ನಾಟಕದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ನಾಂದಿ ಹಾಡಿದ್ದರು. ಆಧುನಿಕ ಯುಗದಲ್ಲಿ ನಾವೆಲ್ಲರೂ ರಾಷ್ಟ್ರದ ಸ್ವಚ್ಚತೆಗೆ ಮುಂದಾಗಿ ಆರೋಗ್ಯವಂತ ಭಾರತ ನಿರ್ಮಿಸಲು ಮುಂದಾಗಬೇಕು ಎಂದು 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೆ.ಆರ್.ಆನಂದ್ ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಡಿ.ಜೆ.ಸುದೀನ್ ಕುಮಾರ್, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಚ್.ಸಿ.ರೇಖಾ, ಸರ್ಕಾರಿ ಸಹಾಯಕ ವಕೀಲರಾದ ಶಾರದ, ಯಶೋದಾ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶ್ರೀನಿವಾಸ್, ಕಾರ್ಯದರ್ಶಿ ಎಂ.ನಾಗೇಶ್, ಸಹಕಾರ್ಯದರ್ಶಿ ನಾರಾಯಣ ಸ್ವಾಮಿ, ಹಿರಿಯ ವಕೀಲರಾದ ಜಿ.ಪಾಪಣ್ಣ, ದೇವರಾಜೇಗೌಡ, ಸುರೇಶ್, ಡಿ.ಎಚ್.ಮಲ್ಲಿಕಾರ್ಜುನಯ್ಯ, ಟಿ.ಕೆ.ಹಿರಿಯಣ್ಣ, ಆರ್.ಸುರೇಶ್, ರಾಜಯ್ಯ, ವಿ.ಎಲ್, ನರಸಿಂಹ ಮೂರ್ತಿ, ಲಕ್ಷ್ಮೀಪ್ರಸಾದ್ ಇತರರು ಪೊರಕೆ ಹಿಡಿದು ನ್ಯಾಯಾಲಯದ ಆವರಣದ ಮುಂದಿನ ಕಸ ಗುಡಿಸಿದರು. ವಕೀಲರು ಭಾಗವಹಿಸಿದ್ದರು.