ಕಲಬುರ್ಗಿ: ಶಾಲಾ ಮಕ್ಕಳಿಂದ ವಾಹನ ಸವಾರರಿಗೆ ಗುಲಾಬಿ ಹೂ ಕೊಡಿಸುವ ಮೂಲಕ ಸಂಚಾರ ನಿಯಮಗಳ ಕುರಿತು ನಗರದ ಸಂಚಾರ ಪೊಲೀಸರು ವಿವಿಧೆಡೆ ಜನಜಾಗೃತಿ ಮೂಡಿಸುತ್ತಿರುವುದು ಗುರುವಾರ ಗಮನ ಸೆಳೆಯಿತು.
ಸರ್ದಾರ್ ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಅವರು ಜನಜಾಗೃತಿಗೆ ಚಾಲನೆ ನೀಡಿದರು.
‘ಬೈಕ್ ಸವಾರರು ಇನ್ನು ಮುಂದೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಲೇಬೇಕು. ನಿಯಮ ಪಾಲಿಸದಿದ್ದರೆ ದಂಡ ವಿಧಿಸುವುದು ಅನಿವಾರ್ಯವಾಗುತ್ತದೆ. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಮತ್ತು ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಲು ವಾಹನ ಸವಾರರಿಗೆ ಶಾಲಾ ಮಕ್ಕಳಿಂದ ಗುಲಾಬಿ ಹೂ ಕೊಡಿಸಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.
ಆರಂಭದಲ್ಲಿ ಸೂಕ್ತ ತಿಳಿವಳಿಕೆ ಹಾಗೂ ಜನಜಾಗೃತಿ ಮೂಡಿಸಲಾಗುವುದು. ಆನಂತರ ದಂಡ ವಿಧಿಸುವುದನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ನಗರದಲ್ಲಿ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂದರು.
ಸಂಚಾರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶಾಂತಿನಾಥ, ಪಿಎಸ್ಐ ಶೌಕತ್ ಅಲಿ, ಸಿಬ್ಬಂದಿ ಮತ್ತು ಶಾಲಾ ಮಕ್ಕಳು ಜಾಗೃತಿ ಅಭಿಯಾನದಲ್ಲಿ ಇದ್ದರು.