ಚಿತ್ರದುರ್ಗ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂದುಳಿದವರ ಅಭಿವೃದ್ಧಿಗಾಗಿ ಚುನಾವಣೆ ಪ್ರಣಾಳಿಕೆ ಮತ್ತು ಬಜೆಟ್ನಲ್ಲಿ ಮಾಡಿರುವ ಘೋಷಣೆಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ದೂರಿದರು.
ನೀಲಕಂಠೇಶ್ವರ ಸ್ವಾಮಿ ದೇಗುಲದ ಮುಂಭಾಗ ಶುಕ್ರವಾರ ರಾಜ್ಯ ಮಡಿವಾಳರ ಸಂಘದಿಂದ 14 ರಾಜ್ಯಗಳಲ್ಲಿನ ಮಡಿವಾಳ ಸಮುದಾಯ ದವರನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಮತ್ತು ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು.
‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ಈವರೆಗೂ ಏನೆಲ್ಲಾ ಘೋಷಣೆ ಮಾಡಿದೆಯೋ ಅವೆಲ್ಲವನ್ನೂ ಜಾರಿಗೆ ತರುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
‘ಈಚೆಗೆ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಸಚಿವರು ಹಿಂದುಳಿದ ಆಯೋಗದ ಅಧ್ಯಕ್ಷ ಕಾಂತರಾಜ್ ಅಧ್ಯಕ್ಷತೆಯಲ್ಲಿ ನಡೆದ ಜಾತಿ ಸಮೀಕ್ಷೆ ಪೂರ್ಣಗೊಂಡಿದೆ ಎಂಬ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಜನವರಿ ಅಂತ್ಯದೊಳಗೆ ವರದಿ ಬಹಿರಂಗವಾಗಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ, ಆ ಕೆಲಸವನ್ನು ಮಾಡಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ಜಾತಿ ಸಮೀಕ್ಷೆಗೆ ಕೋಟ್ಯಂತರ ರೂಪಾಯಿ ಹಣ ಈಗಾಗಲೇ ಖರ್ಚಾಗಿದೆ. ವರದಿ ತಯಾರಾಗಿದೆ ಎಂದು ಸರ್ಕಾರ ಹೇಳಿ 6 ತಿಂಗಳಾಗಿವೆ. ಆದ ಕಾರಣ ಸಮೀಕ್ಷೆ ಬಿಡುಗಡೆ ಯಾಕೆ ಮಾಡಿಲ್ಲ ಎಂದು ಭರವಸೆ ಸಮಿತಿಯನ್ನು ನಾನು ಪ್ರಶ್ನಿಸುವೆ. ಅದಕ್ಕೆ ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರು ಉತ್ತರ ನೀಡಲಿ. ತಯಾರಾಗಿರುವುದನ್ನು ಬಿಡುಗಡೆ ಮಾಡಲು ಏನು ತೊಂದರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಮಡಿವಾಳ ಸಂಸ್ಥಾನದ ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ ಮೆರವಣಿಗೆ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮಡಿವಾಳರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಾಲಾಜಿ ರಾವ್ ಸಿಂಧೆ, ಜಿಲ್ಲಾಧ್ಯಕ್ಷ ರಮೇಶ್, ರಾಜ್ಯಾಧ್ಯಕ್ಷ ನಂಜಪ್ಪ, ರಾಜ್ಯ ಘಟಕದ ಮಾಜಿ ಅಧ್ಯಕ್ಷ ಹೆಂಜಾರಪ್ಪ, ಚಿದಾನಂದಪ್ಪ, ಸದಾಶಿವ, ಪ್ರಶಾಂತ್, ಕೆ.ತಿಪ್ಪೇಸ್ವಾಮಿ, ಮಂಜುನಾಥ್ ಮತ್ತು ಇತರರು ಉಪಸ್ಥಿತರಿದ್ದರು.