ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದ ಹಿರಿಯ ಸಾಹಿತಿ ರಂ.ಶಾ. ಲೋಕಾಪುರೆ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಮಹಾರಾಷ್ಟ್ರದ ಪುಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
2016ರ ನ.1ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಲೋಕಾಪುರೆ ಅವರು ಗೈರು ಹಾಜರಾಗಿದ್ದರು. ಸಚಿವೆ ಉಮಾಶ್ರೀ ಅವರು ಪುಣೆಯಲ್ಲಿರುವ ಲೋಕಾಪುರೆ ಅವರ ಮನೆಗೆ ಶನಿವಾರ ಭೇಟಿ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಮಾಶ್ರೀ, ‘ಕನ್ನಡ, ಮರಾಠಿ, ಸಂಸ್ಕೃತ ಭಾಷೆಗಳ ಮೇಲೆ ಅಪಾರ ಪಾಂಡಿತ್ಯ ಹೊಂದಿರುವ ಲೋಕಾಪುರೆ ಅವರು ಸಾಹಿತ್ಯದಲ್ಲಿ ಬಹಳ ದೊಡ್ಡ ಸಾಧನೆ ಮಾಡಿದ್ದಾರೆ. ಅತ್ಯಂತ ಬಡತನದಿಂದ ಬಂದರೂ ಸಾಹಿತ್ಯ ಶ್ರೀಮಂತಿಕೆ ಹೆಚ್ಚಿಸಿಕೊಂಡಿದ್ದಾರೆ’ ಎಂದರು.
ಪ್ರಶಸ್ತಿ ಸ್ವೀಕರಿಸಿದ ಲೋಕಾಪುರೆ ಅವರು ಮಾತನಾಡಿ, ‘ಪುಣೆ, ಮುಂಬಯಿ, ಬೆಳಗಾವಿ ನಗರಗಳ ನಡುವಿನ ನಿಕಟ ಬಾಂಧವ್ಯ ನನಗೆ ಹಲವು ಭಾಷೆಗಳಲ್ಲಿ ಅಧ್ಯಯನ ಮಾಡಲು ಸಹಾಯವಾಯಿತು.
ಸಂತ ಜ್ಞಾನೇಶ್ವರರ ಅನುಗ್ರಹದಿಂದ ಸಂಸ್ಕೃತ, ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ‘ಜ್ಞಾನೇಶ್ವರಿ’ ಸಾಹಿತ್ಯ ರಚನೆ ಮಾಡಿದ್ದೇನೆ. ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ವಂದನೆಗಳು’ ಎಂದರು.