ಶಿವಮೊಗ್ಗ: ‘ಸಾಹಿತ್ಯ ಕುರಿತು ಬಹುತೇಕರು ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುತ್ತಿದ್ದಾರೆ’ ಎಂದು ಪ್ರಾಧ್ಯಾಪಕ ಮಲ್ಲಿಕಾರ್ಜುನ ಮೇಟಿ ಬೇಸರ ವ್ಯಕ್ತಪಡಿಸಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಸಾಹಿತ್ಯದ ಸಿದ್ಧಾಂತ ಸಾಮಾಜಿಕ ದೃಷ್ಟಿಕೋನದಿಂದ ಇರಬೇಕು. ಸಾಮಾಜಿಕ ಪ್ರಜ್ಞೆ ಹಾಗೂ ಅಸ್ತಿತ್ವದ ಪ್ರಜ್ಞೆ ಅರಿತು ಮಾತನಾಡಬೇಕು’ ಎಂದು ಹೇಳಿದರು.
‘ಮೌಲ್ಯಗಳು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿರುತ್ತವೆ. ಇಡೀ ಬದುಕಿನ ಅಸ್ತಿತ್ವದ ಅನುಭವ ಚಾರಿತ್ರಿ ಕವಾಗಿ ಕಟ್ಟಿಕೊಡುವ ಮೌಲ್ಯಗಳು ಇಂದು ವ್ಯಾವಹಾರಿಕವಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಪ್ರಸ್ತುತ ಕಾರ್ಪೋರೇಟ್ ವಲಯ ಓಲೈಸುವ ಶಕ್ತಿಗಳು ಮೌಲ್ಯಗಳ ವಿರುದ್ಧದ ನೆಲೆ ಸೃಷ್ಟಿ ಮಾಡುತ್ತ ಮೌಲ್ಯಗಳು ಕೇವಲ ಭ್ರಮೆಗಳು ಎಂಬ ಭಾವನೆ ಮೂಡಿಸುತ್ತಿವೆ’ ಎಂದು ಆರೋಪಿಸಿದರು.
‘ತಳ ಸಮುದಾಯದ ಮೇಲೆ ಹಲವು ಶತಮಾನಗಳಿಂದಲೂ ದೌರ್ಜನ್ಯ, ಶೋಷಣೆ ನಡೆಯುತ್ತಲೇ ಬಂದಿದೆ. ಸಾಹಿತಿಗಳು ಹಾಗೂ ಯುವ ಬರಹಗಾರರು ಈ ಕುರಿತು ಧ್ವನಿ ಎತ್ತಬೇಕು’ ಎಂದರು.
ಗೋಷ್ಠಿಯಲ್ಲಿ ಡಾ.ಎಚ್.ಟಿ. ಕೃಷ್ಣಮೂರ್ತಿ, ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರಯ್ಯ, ಡಾ.ಟಿ.ರಾಜೇಂದ್ರ, ಮಲ್ಲಿಕಾರ್ಜುನ ಹಕ್ರೆ, ಕಡಿದಾಳ್ ದಯಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.