ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಮ್ಮ ಸಿಎಂ ಹಾದಿ ಪೂರ್ವ ನಿಯೋಜಿತ?

ಶಶಿಕಲಾ ಕುಟುಂಬದಿಂದ ರಾಜಕೀಯ ನಿಯಂತ್ರಣ!
Last Updated 6 ಫೆಬ್ರುವರಿ 2017, 7:59 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಶಶಿಕಲಾ ಅಧಿಕಾರ ಸ್ವೀಕರಿಸಲಿರುವುದು ಕೆಲವರಲ್ಲಿ ಆಶ್ಚರ್ಯ, ಹೆಚ್ಚನವರಿಗೆ ನಿರೀಕ್ಷಿತ. ಆದರೆ, ನಿಜಕ್ಕೂ ಇದು ಶಶಿಕಲಾ ಮತ್ತು ಅವರ ಕುಟುಂಬದವರ ಪೂರ್ವ ನಿಯೋಜಿತ ಯೋಜನೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಅವರು ಕೊನೆಯುಸಿರೆಳೆದು (ಡಿ.5)ಸರಿಯಾಗಿ ಎರಡು ತಿಂಗಳ ಬಳಿಕ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ವಿ.ಕೆ. ಶಶಿಕಲಾ ನಟರಾಜನ್ ಅಯ್ಕೆಯಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತಸ್ನೇಹಿತೆ ವಿ.ಕೆ. ಶಶಿಕಲಾ ನಟರಾಜನ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಅವರು ಮುಖ್ಯಮಂತ್ರಿ ಹುದ್ದೆಗೇರಿದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾಗುವ ಮೂಲಕ ತಮಿಳುನಾಡು ಶಾಸಕಾಂಗ ಸಭೆಗಳು ನಡೆಯುವ ಫೋರ್ಟ್‌ ಸೇಂಟ್‌ ಜಾರ್ಜ್ ನ ಅಧಿಕಾರ ವಹಿಸಲು ಹಾದಿ ಸುಗಮವಾಗಿದ್ದು, ಮುಖ್ಯಮಂತ್ರಿಯಾಗಿ ಶಶಿಕಲಾ ಪ್ರಮಾಣ ವಚನ ಸ್ವೀಕರಿಸುವುದಷ್ಟೇ ಬಾಕಿಯಿದೆ.

‘ಚಿನ್ನಮ್ಮ’ ಯೋಜಿತ ಹಾದಿ:
ಶಶಿಕಲಾ ಅವರ ಕುಟುಂಬ ತಮಿಳುನಾಡು ರಾಜಕೀಯದಲ್ಲಿ ಸಕ್ರಿಯವಾಗಿದೆ. ಜಯಲಲಿತಾ ಅಧಿಕಾರದಲ್ಲಿದ್ದಾಗಲೂ ಶಶಿಕಲಾ ಅವರ ಕುಟುಂಬ ಮಾಡುವ ನಿರ್ಧಾರ ಯೋಜಿತ ರೂಪದಲ್ಲಿ ಕಾರ್ಯಗತಗೊಳ್ಳುವಂತೆ ನೋಡಿಕೊಳ್ಳಲಾಗಿತ್ತು. ಜಯಲಲಿತಾ ಅವರಿಗೆ ತಿಳಿದಿದ್ದರೂ ಅವಕಾಶ ನೀಡಿದ್ದರು ಎನ್ನುವ ಅನುಮಾನ ವ್ಯಕ್ತವಾಗಿದೆ.

ಡಿ.5ರಂದು ಜಯಲಲಿತಾ ಅವರ ಸಾವಿನ ಸುದ್ದಿ ಪ್ರಕಟಗೊಳ್ಳುವುದಕ್ಕೂ ಮುನ್ನ ಶಶಿಕಲಾ ಅವರ ಕಿರಿಯ ಸಹೋದರ ವಿ.ಧಿವಾಹರನ್‌ ಪಕ್ಷದ ಶಾಸಕರು ಹಾಗೂ ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದರುಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಮುಂದಿನ ಪ್ರತಿ ಹೆಜ್ಜೆಯನ್ನು ನಿಯಂತ್ರಿಸುವುದು ಹಾಗೂ ನಿರ್ಧರಿಸುವ ಯಾವುದಕ್ಕೂ ಅಸಮ್ಮತಿ ವ್ಯಕ್ತವಾಗದಂತೆ ಗಮನಿಸುವುದು  ಇದರ ಉದ್ದೇಶವಾಗಿತ್ತು ಎನ್ನಲಾಗಿದೆ.

ಚಿನ್ನಮ್ಮ ಅವರಿಗೋಸ್ಕರ ಸಿಎಂ ಸ್ಥಾನವನ್ನು ಕಾಯ್ದುಕೊಳ್ಳಲು ರಾತ್ರೋರಾತ್ರಿ ಒ.ಪನ್ನೀರ್‌ಸೆಲ್ವಂ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದರು. ಜಯಲಲಿತಾ ಅವರ ಅಂತಿಮ ಸಂಸ್ಕಾರದಲ್ಲಿ ಶಶಿಕಲಾ ಮತ್ತು ಅವರ ಕುಟುಂಬ ಅತ್ಯಾಪ್ತರೆಂಬುದನ್ನು ಸಮಾಜದಲ್ಲಿ ಬಿಂಬಿಸುವ ಕೆಲಸ ನಡೆದವು.

ರಾಜ್ಯದ ಪ್ರಮುಖ ರಾಜಕೀಯ ನಿರ್ಧಾರಗಳು ನಡೆಯುತ್ತಿದ್ದ ಪೋಸ್‌ ಗಾರ್ಡನ್‌ ನಿವಾಸದಲ್ಲಿ ಶಶಿಕಲಾ ಮತ್ತು ಕುಟುಂಬ ಮುಂದಿನ ಯೋಜನೆ ರೂಪಿಸುವುದರಲ್ಲಿ ನಿರತರಾದರು.

ರಾಜ್ಯದ ಪ್ರಮುಖ ನಾಯಕರು ಹಾಗೂ ಜನ ಸಾಮಾನ್ಯರು ಶಶಿಕಲಾ ಅವರ ಭೇಟಿಗೆ ಬರುತ್ತಿರುವ ಬಗ್ಗೆ ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಿಂದ ಪ್ರತಿ ಗಂಟೆ ಮಾಧ್ಯಮ ಪ್ರಕಟಣೆ ಹೊರಡಿಸಲಾಗುತ್ತಿತ್ತು.

ಪಕ್ಷವನ್ನು ಮುನ್ನಡೆಸುವಂತೆ ಹಿರಿಯ ನಾಯಕರು ಶಶಿಕಲಾ ಅವರಲ್ಲಿ ಕೈಮುಗಿದು ಮನವಿ ಮಾಡುತ್ತಿರುವಂಥ ದೃಶ್ಯಗಳನ್ನು ‘ಜಯಾ’ಟಿವಿಯಲ್ಲಿ ಡಿ.10ರನ್ನು ಪ್ರಸಾರ ಮಾಡಲಾಗಿದೆ. ಶಶಿಕಲಾ ಅವರ ಕುಟುಂಬ ಜಯಾ ಟಿವಿ ನಿರ್ವಹಿಸುತ್ತಿದೆ.

ಡಿ.29ರಂದು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅವರನ್ನು ಆಯ್ಕೆ ಮಾಡಲಾಯಿತು. ಡಿ.31ರಂದು ಪಕ್ಷದ ಕಚೇರಿ ಪ್ರವೇಶಿಸಿದ ಶಶಿಕಲಾ ಭಾವಪೂರ್ಣ ಭಾಷಣ ಮಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿದರು. ತನ್ನ ಮುಂದಿನ ಜೀವನವನ್ನು ಪಕ್ಷದ ಉನ್ನತಿಗೆ ಮುಡುಪಾಗಿಡುವುದಾಗಿ ಘೋಷಿಸಿದರು.

ಜನವರಿಯಲ್ಲಿ ಸಿಎಂ ಸ್ಥಾನಕ್ಕೇರುವ ಸುದ್ದಿ ಹರಿದಾಡಿತ್ತಾದರೂ ಜಲ್ಲಿಕಟ್ಟು ವಿವಾದ ಬುಗಿಲೆದ್ದ ಕಾರಣ ರಾಜಕೀಯ ಬೆಳವಣಿಗೆ ತಣ್ಣಗಾಗಿತ್ತು. ಆದರೆ, ಫೆ.3ರಂದು ಪಕ್ಷದ ಪ್ರಮುಖ ಸ್ಥಾನಗಳಿಗೆ ಹಲವು ನಾಯಕರನ್ನು ಶಶಿಕಲಾ ನೇಮಿಸಿದರು.

ನಂತರದಲ್ಲಿ ಮುಖ್ಯಮಂತ್ರಿ ಕಚೇರಿಯ ಸಲಹೆಗಾರರ ಸ್ಥಾನಗಳಲ್ಲಿನ ಅಧಿಕಾರಿಗಳ ಸ್ಥಾನ ಪಲ್ಲಟನೆ ನಡೆಯಿತು. ಫೆ.5ರಂದು ಶಶಿಕಲಾ ಅವರು ಮುಖ್ಯಮಂತ್ರಿಯಾಗಲು ಎಲ್ಲ ಹಾದಿ ಸುಗುಮಗೊಳಿಸುವ ಆಯ್ಕೆ ಪ್ರಕಟಿಸಲಾಯಿತು.

ಕಾನೂನಿನ ಅನ್ವಯ ಮುಂದಿನ ಆರು ತಿಂಗಳೊಳಗಾಗಿ ಶಶಿಕಲಾ ಅವರು ತಮಿಳುನಾಡು ವಿಧಾನಸಭಾ ಕ್ಷೇತ್ರದ ಸ್ಥಾನದಲ್ಲಿ ಜಯಗಳಿಸಬೇಕು.

ಪನ್ನೀರ್‌ಸೆಲ್ವಂ ರಾಜೀನಾಮೆ:
ಭಾನುವಾರ ಪೋಸ್‌ ಗಾರ್ಡನ್‌ ನಿವಾಸದಲ್ಲಿ ಶಶಿಕಲಾ ಅವರನ್ನು ಭೇಟಿ ಮಾಡಿದ ಒ.ಪನ್ನೀರ್‌ಸೆಲ್ವಂ, ಸಲಹೆ ಪಡೆದು ಪಕ್ಷದ ತುರ್ತು ಶಾಸಕರ ಸಭೆ ನಡೆಸಿ ರಾಜೀನಾಮೆ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT