ಬಾಗಲಕೋಟೆ: ಶಿಕ್ಷಣ ವಂಚಿತರು ಕಣ್ಣಿದ್ದರೂ ಕುರುಡರಂತೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸಮಾಜವು ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣವಂತರಾದಾಗ ಮಾತ್ರ ಸಾಧ್ಯ ಎಂದು ಶಾಸಕ ಎಚ್.ವೈ. ಮೇಟಿ ಸಲಹೆ ನೀಡಿದರು.
ನವನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕೊರಮ(ಭಜಂತ್ರಿ) ಸಮಾಜದ ನೌಕರರ ಕ್ಷೇಮಾಭಿವೃದ್ಧಿ ಸಂಘವು ಭಾನುವಾರ ಹಮ್ಮಿಕೊಂಡಿದ್ದ 3ನೇ ಜಿಲ್ಲಾ ಸಮಾವೇಶ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಮೀಸಲಾತಿ ಕಲ್ಪಿಸದೇ ಹೋಗಿದ್ದರೆ ಪರಿಶಿಷ್ಟ ಸಮಾಜದ ಸ್ಥಿತಿಗತಿಗಳು ಊಹಿಸಲು ಕಷ್ಟವಾಗುತ್ತಿತ್ತು. ಬಡತನ, ಮೂಢನಂಬಿಕೆಯಿಂದ ಇಂತಹ ಸಮಾಜಗಳು ಹೊರಬರಬೇಕು. ಹೊರ ಬಂದು ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನ ಮೂಲಕ ಶ್ರಮಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸುವ ಮೂಲಕ ಸಮಾಜದ ಸಂಘಟನೆಗೆ ಒತ್ತು ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಧಾರವಾಡದ ಜೆ.ಎಸ್.ಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಲ್.ಎಚ್. ಭಜಂತ್ರಿ ಉಪನ್ಯಾಸ ನೀಡಿ, ನೂಲಿ ಚಂದಯ್ಯ ಹಠದ ಶರಣ. ತನ್ನ ಕೊರಳಲಿದ್ದ ಲಿಂಗ ಕಳಚಿ ಬಿದ್ದಾಗ ಅದನ್ನು ಲೆಕ್ಕಿಸದೇ ಕಾಯಕ ನಿಷ್ಠೆ ಮೆರದ ವಚನಕಾರ. ತಮ್ಮ ಕಾಯಕ ನಿಷ್ಠೆಯಿಂದ ಗುರುತಿಸಿಕೊಂಡ ಮಹಾಪುರುಷ. ಇಂತಹ ಸಮಾಜ ಇಂದು ಸಂಘಟನೆಯ ಕೊರತೆಯಿಂದ ಬಹಳ ಹಿಂದುಳದಿದೆ. ರಾಜಕೀಯ, ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಸ್ಕೃತಿಕವಾಗಿ ಬೆಳಯಬೇಕಾದರೆ ಸಂಘಟನೆ ಮತ್ತು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಬುಡಕಟ್ಟು ಜನಾಂಗವಾಗಿರುವ ಕೊರಮ ಸಮುದಾಯದ ಜನರು ಇಂದಿಗೂ ಸಹ ಬುಟ್ಟಿ, ಕಸಬರಿಗೆ, ನೇಯ್ಗೆ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಪ್ಲಾಸ್ಟಿಕ್ ಸಾಮಾಗ್ರಿಗಳಿಂದಾಗಿ ಮೂಲ ಉದ್ಯೋಗಕ್ಕೆ ಪೆಟ್ಟು ಬಿದ್ದಿದೆ.
ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಇಲ್ಲದಿದ್ದರೆ ಮುಂದೆ ಬರಲು ಸಾಧ್ಯವಿಲ್ಲ. ಅದರ ಜೊತಗೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ದೃಷ್ಟಿಯಲ್ಲಿ ಹಿರಿಯರು ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಮುರನಾಳದ ಜಗನ್ಮಾಥ ಮಹಾಪುರಷರು ಸಾನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷ ಶಂಕರಗೌಡ ಪಾಟೀಲ. ಬಿಟಿಡಿಎ ಅಧ್ಯಕ್ಷ ಎ.ಡಿ.ಮೊಕಾಶಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪನಗೌಡರ, ಪ್ರಕಾಶ ತಪಶೆಟ್ಟಿ, ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಬಿ.ಎಚ್. ಭಜಂತ್ರಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಅಶೋಕ ಭಜಂತ್ರಿ, ಬೆಳಗಾವಿಯ ರಾಮೋಜಿ ಭಜಂತ್ರಿ, ಮುತ್ತಪ್ಪ ಭಜಂತ್ರಿ, ಉದಯ ಕಟ್ಟಿಮನಿ, ಕಲ್ಲುರಾಜ ಭಜಂತ್ರಿ, ಕೆಇಬಿ ಪರಶುರಾಮ ಭಜಂತ್ರಿ, ಸುರೇಶ ಭಜಂತ್ರಿ, ಕೆ.ಟಿ. ಪಾಟೀಲ ಸೇರಿದಂತೆ ಜಿಲ್ಲೆಯ ವಿವಿಧ ವಿಭಾಗದ ನೌಕರರು ಉಪಸ್ಥಿತರಿದ್ದರು. ಆರ್.ಎಲ್. ಭಜಂತ್ರಿ ಸ್ವಾಗತಿಸಿದರು. ಶಿಕ್ಷಕ ಪರಶುರಾಮ ಭಜಂತ್ರಿ ನಿರೂಪಿಸಿದರು. ದೈಹಿಕ ಶಿಕ್ಷಕ ಮಹಾಂತೇಶ ಭಜಂತ್ರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.