ದೇವನಹಳ್ಳಿ: ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಮಂಡಿಸಿರುವ ಬಜೆಟ್ ನಲ್ಲಿ ರೈತರಿಗೆ ವಂಚನೆ ಮಾಡಿ ಖಾಸಗಿ ಬಂಡವಾಳ ಶಾಹಿಗಳಿಗೆ ಮಣೆ ಹಾಕಿದ್ದಾರೆ ಎಂದು ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.
ದೇವನಹಳ್ಳಿ ಗುರುಭವನದಲ್ಲಿ ನಡೆದ ತಾಲ್ಲೂಕು ರೈತಸಂಘ ಹಾಗೂ ವಿವಿಧ ಹೋಬಳಿ ಘಟಕವಾರು ರೈತ ಸಂಘದ ನೂತನ ಪದಾಧಿಕಾರಿಗಳ ನೇಮಕ ಕುರಿತು ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಮುಖಂಡರು ರೈತರಿಗೆ ಬಾರಿ ಆದ್ಯತೆ ನೀಡಿದ್ದಾರೆ. ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಹತ್ತು ಲಕ್ಷ ಕೋಟಿ ರೈತರಿಗೆ ಸಾಲ ಎಂದು ಘೋಷಿಸಿರುವ ಸರ್ಕಾರ ಪ್ರಸ್ತುತ ದೇಶದಲ್ಲಿರುವ16 ಬೆಳೆ ಖಾಸಗಿ ವಿಮಾ ಕಂಪೆನಿಗಳಿಗೆ ವಹಿಸಿರುವ ಔಚಿತ್ಯವೇನು ಎಂದು ಪ್ರಶ್ನಿಸಿದರು.
ದೇಶದಲ್ಲಿ ಶೇ 80 ರಷ್ಟು ವಿವಿಧ ರಾಜ್ಯಗಳಲ್ಲಿ ಬರಗಾಲವಿದೆ, ಕಳೆದ ವರ್ಷ ಫಸಲ್ ಭೀಮಾ ಯೋಜನೆ ಜಾರಿ ಮಾಡಲಾಗಿದೆ. ಮುಂಗಾರು ಹಿಂಗಾರು ಬೆಳೆ ನಷ್ಟವಾಗಿದೆ, ಫಸಲ್ ಭೀಮಾ ಯೋಜನೆಯಡಿ ರೈತರ ಬ್ಯಾಂಕ್ ಖಾತೆಯಲ್ಲಿ ಬಿಡಿಗಾಸು ಬಂದಿಲ್ಲ ಎಂದು ದೂರಿದರು.
ರೈತ ಸಂಘ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಜಿಲ್ಲಾ ಅಧ್ಯಕ್ಷ ಕೆಂಚೇಗೌಡ, ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಹರೀಶ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಉಪಸ್ಥಿತರಿದ್ದರು.
ತಾಲ್ಲೂಕು ನೂತನ ಪದಾಧಿಕಾರಿಗಳು: ಗಾರೆ ರವಿಕುಮಾರ್ ಅಧ್ಯಕ್ಷ, ಮುನಿಶಾಮಪ್ಪ ಗೌರವಾಧ್ಯಕ್ಷ, ನಾರಾಯಣಸ್ವಾಮಿ ಕಾರ್ಯಾಧ್ಯಕ್ಷ, ಚನ್ನಹಳ್ಳಿ ನಾರಾಯಣಸ್ವಾಮಿ, ವೆಂಕಟೇಶ್, ಮಂಡಿಬೆಲೆ ನಾರಾಯಣ ಸ್ವಾಮಿ ಉಪಾಧ್ಯಕ್ಷ, ರಮೇಶ್, ಮುನಿಶಾಮಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಆರ್.ಆನಂದ್, ಅರುಣ್ ಕುಮಾರ್, ಸೊಣ್ಣೇಗೌಡ, ಭೈರೇಗೌಡ, ಸಂಘಟನಾ ಕಾರ್ಯದರ್ಶಿ ಮತ್ತು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರಾಗಿ ಪ್ರಕಾಶ್ ನೇಮಕಗೊಂಡರು.