ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮಂಗಳವಾರ ಆರಂಭವಾದ ದಡಾರ ಮತ್ತು ದುಬೆಲ್ಲಾ ಲಸಿಕೆ ಅಭಿಯಾನದಡಿ ಮೊದಲೆ ದಿನವೇ 23,567 ಮಕ್ಕಳಿಗೆ ಆರೋಗ್ಯ ಇಲಾಖೆ ಲಸಿಕೆ ಹಾಕಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆರಂಭವಾಗಿರುವ ಅಭಿಯಾನದಲ್ಲಿ 9 ತಿಂಗಳಿನಿಂದ 5 ವರ್ಷದ 2914 ಮಕ್ಕಳಿಗೆ, 5ರಿಂದ 10 ವರ್ಷದ 7787 ಮಕ್ಕಳಿಗೆ ಮತ್ತು 10 ವರ್ಷದಿಂದ 15 ವರ್ಷದ 12866 ಮಕ್ಕಳು ಲಸಿಕೆ ಹಾಕಲಾಗಿದೆ. ಇದರಲ್ಲಿ 11,743 ಬಾಲಕಿಯರು ಮತ್ತು 11,824 ಬಾಲಕರು ಲಸಿಕೆ ಹಾಕಿಸಿಕೊಂಡಿದ್ದಾರೆ.
ಈ ಅಭಿಯಾನ ಇದೇ 28ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 2,65,353 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಇಲಾಖೆ ಹೊಂದಿದೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಮಂಗಳವಾರ ದಡಾರ ಮತ್ತು ರುಬೆಲ್ಲಾ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 6,572 ಮಕ್ಕಳಿಗೆ ಲಸಿಕೆ ನೀಡಲಾಯಿತು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲೋಕೇಶ್ ತಿಳಿಸಿದ್ದಾರೆ.
ತಾಲ್ಲೂಕಿನ ಎಲ್ಲಾ ಶಾಲೆಗಳಿಗೂ ಆರೋಗ್ಯ ಕಾರ್ಯಕರ್ತರು ತೆರಳಿ 9ರಿಂದ 15 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ನೀಡಿದ್ದು, ಇದರಲ್ಲಿ 3296 ಹೆಣ್ಣು ಮಕ್ಕಳು ಹಾಗೂ 3276 ಗಂಡುಮಕ್ಕಳಿಗೆ ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದಿದ್ದಾರೆ.
ದಡಾರ ಮತ್ತು ರುಬೆಲ್ಲಾ ಲಸಿಕಾ ಕಾರ್ಯಕ್ರಮವನ್ನು ಮಲೆನಾಡು ವಿದ್ಯಾ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಪಂಚಾ ಯಿತಿ ಉಪಾಧ್ಯಕ್ಷ ರಾಮಸ್ವಾಮಿಶೆಟ್ಟಿಗದ್ದೆ ಮಂಗಳವಾರ ಉದ್ಘಾಟಿಸಿದರು. ನಂತರ ಮಾತನಾಡಿ, 9ರಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಈ ಲಸಿಕೆ ಹಾಕಿಸುವ ಮೂಲಕ ಮಕ್ಕಳನ್ನು ದಡಾರ ಮತ್ತು ರುಬೆಲ್ಲಾ ಸೋಂಕಿನಿಂದ ಮುಕ್ತಿಗೊಳಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲಿಕಾರ್ಜುನಪ್ಪ ದಡಾರ ಮತ್ತು ರುಬೆಲ್ಲಾ ರೋಗದ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ವಿಚಕ್ಷಣಾಧಿಕಾರಿ ಡಾ. ಕಲ್ಪನಾ, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗಂಗಾಧರ್, ಮಲೆನಾಡು ವಿದ್ಯಾಸಂಸ್ಥೆಯ ಆಡಳಿ ತಾಧಿಕಾರಿ ಶಾಂತಕುಮಾರಿ ಇದ್ದರು.