ಕಲಬುರ್ಗಿ: ರಾಜ್ಯದಲ್ಲಿ ಫೆಬ್ರುವರಿ 2ರವರೆಗೆ ಒಟ್ಟಾರೆ 19,220 ರೈತರಿಂದ 5.35ಲಕ್ಷ ಕ್ವಿಂಟಲ್ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿಸಲಾಗಿದೆ. ಇದಕ್ಕೆ ₹24.10 ಕೋಟಿ ಪ್ರೋತ್ಸಾಹಧನ ನೀಡಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಅವರು ಕೇಳಿದ ಪ್ರಶ್ನೆಗೆ ಅವರು ವಿಧಾನ ಪರಿಷತ್ಗೆ ಲಿಖಿತ ಉತ್ತರ ನೀಡಿದ್ದಾರೆ.
ಪ್ರಸಕ್ತ ವರ್ಷದಲ್ಲಿ ತೊಗರಿ ಬೆಲೆ ಕುಸಿದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. 2016ನೇ ಸಾಲಿನಲ್ಲಿ ಬಫರ್ಸ್ಟಾಕ್ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಹಾಗೂ ಬೋನಸ್ ಒಳಗೊಂಡಂತೆ ಪ್ರತಿ ಕ್ವಿಂಟಲ್ಗೆ ₹5,050ರಂತೆ ರೈತರಿಂದ ಖರೀದಲಾಗುತ್ತಿದೆ.
ನ್ಯಾಫೆಡ್, ಭಾರತೀಯ ಆಹಾರ ನಿಗಮ, ಸ್ಮಾಲ್ ಫಾರ್ಮರ್ಸ್ ಅಗ್ರಿಕಲ್ಚರ್ ಕನ್ಸೋರ್ಟಿಯಂ ಸಂಸ್ಥೆಗಳು ಖರೀದಿ ಆರಂಭಿಸಿವೆ ಎಂದು ವಿವರ ನೀಡಿದ್ದಾರೆ.
ತೊಗರಿ ಬೆಳೆಯಲು ರಸ ಗೊಬ್ಬರ, ಬೀಜ, ಕಾರ್ಮಿಕರ ಕೂಲಿ ಮತ್ತಿತರ ವೆಚ್ಚ ಹಾಗೂ ರೈತರು ನೇರವಾಗಿ ಭರಿಸುವ ವೆಚ್ಚವನ್ನು ಪರಿಗಣಿಸಿದರೆ ಎಕರೆಗೆ ₹21,687 ವೆಚ್ಚ ತಗಲುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ಪ್ರತಿ ಕ್ರಿಂಟಲ್ ತೊಗರಿಗೆ ಸರಾಸರಿ ಮಾದರಿ ಬೆಲೆಯು 2013–14ರಲ್ಲಿ ₹3,939, 2014–15ರಲ್ಲಿ ₹4,713, 2015–16ರಲ್ಲಿ ₹7,647, 2016–17 (ಫೆಬ್ರುವರಿ 3ರಿಂದ ಈ ವರೆಗೆ) ₹6,347 ಇದೆ ಎಂದು ಸಚಿವರು ತಿಳಿಸಿದ್ದಾರೆ.