ಸಿರವಾರ: ಮಕ್ಕಳು, ಪಾಲಕರು ಲಸಿಕೆಯ ಚುಚ್ಚುಮದ್ದು ಕುರಿತು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ.ಸುನೀಲ್ ಸರೋದೆ ಹೇಳಿದರು.
ಅವರು ಪಟ್ಟಣದಲ್ಲಿ ಮಂಗಳವಾರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮಕ್ಕಳಿಗೆ ದಡಾರ- ರುಬೆಲ್ಲಾ ನಿಯಂತ್ರಣ ಲಸಿಕೆಯ ಚುಚ್ಚು ಮದ್ದು ನೀಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ದಡಾರ ಮತ್ತು ರುಬೆಲ್ಲಾ ಮಾರಕ ರೋಗಗಳಾಗಿವೆ. ಇವುಗಳನ್ನು ಬಾರದಂತೆ ತಡೆಯುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 9 ತಿಂಗಳಿಂದ 15 ವರ್ಷದೊಳಗಿನ ಮಕ್ಕಳಿಗೆ ಲಸಿಕಾ ಅಭಿಯಾನ ಕೈಗೊಳ್ಳಲಾಗಿದೆ ಅಭಿಯಾನವು ಫೆ.7ರಿಂದ ಫೆ 28ರವರೆಗೆ ನಡೆಯಲಿದೆ ಎಂದರು.
ಪಟ್ಟಣದ ಕಿರಿಯ ಆರೋಗ್ಯ ಕೇಂದ್ರದ ವ್ಯಾಪ್ತಿಯ 20 ಹಳ್ಳಿಗಳ 51 ಶಾಲೆಗಳಿಂದ 13,714 ಮಕ್ಕಳಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆಗೆ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರನ್ನು ಒಳಗೊಂಡ 8 ತಂಡಗಳನ್ನು ರಚಿಸಲಾಗಿದೆ.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಹನುಮಂತಿ ಮಲ್ಲಪ್ಪ, ಡಾ.ಕಾವ್ಯ, ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಮಂಜುಳಾ, ಸಂದೀಪ್ ಪಾಟೀಲ, ಕೃಷ್ಣ ನಾಯಕ, ಚನ್ನಬಸವ ಗಡ್ಲ ಇದ್ದರು.