ಆಲೂರು: ‘18ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ ವಾಹನ ಪರವಾನಗಿ ಇಲ್ಲದವರು ವಾಹನ ಚಾಲನೆ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ’ ಎಂದು ಪ್ರಾದೇಶಿಕ ಸಾರಿಗೆ ಇಲಾಖಾಧಿಕಾರಿ ಎ.ಆರ್.ಶಶಿಕಲಾ ತಿಳಿಸಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ‘29ನೇ ರಸ್ತೆ ಸುರಕ್ಷತಾ ಸಪ್ತಾಹ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಾಹನ ಹೊಂದಿರುವ ಪ್ರತಿಯೊಬ್ಬರು ವಿಮೆ, ಸಂಚಾರ ತೆರಿಗೆ, ಹೊಗೆ ನಿಯಂತ್ರಣ ಪ್ರಮಾಣ ಪತ್ರ, ಚಾಲಕನ ಪರವಾನಗಿಯನ್ನು ಕಡ್ಡಾಯ ವಾಗಿ ಹೊಂದಿರಬೇಕು ಎಂದರು.
ಸಂಚಾರ ನಿಯಮವನ್ನು ಅರಿತರೆ ಅಪಘಾತ ತಡೆಯಬಹುದು. ಈಚೆಗಿನ ಕೋರ್ಟ್ ಆದೇಶದ ಪ್ರಕಾರ ಅಪಘಾತ ಸಂದರ್ಭದಲ್ಲಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ನಂತರ ಪೊಲೀಸ್ ಠಾಣೆಗೆ ತಿಳಿಸಬಹುದು ಎಂದು ತಿಳಿಸಿದರು. ತಹಶೀಲ್ದಾರ್ ಕೆ.ಎನ್.ಶಾರದಾಂಬಾ ಅವರು, ಪಾದಚಾರಿಗಳೂ ಸಹ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದರು.
ಬಿಇಒ ಪಿ.ವೇದಾವತಿ, ಎಎಸ್ಐ ಬ್ಯಾಟರಂಗಾಚಾರ್, ಟಿಎಚ್ಒ ತಿಮ್ಮಯ್ಯ, ಸಾರಿಗೆ ಸಿಬ್ಬಂದಿ ಸತೀಶ್, ಗೌತಮ್, ಚಾಲಕ ಮಂಜುನಾಥ್, ಡ್ರೈವಿಂಗ್ ಶಾಲೆ ಪ್ರಾಂಶುಪಾಲ ದತ್ತಪ್ರಸಾದ್, ನಾಗರಾಜು ಉಪಸ್ಥಿತರಿದ್ದರು.