ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ, ರಾಯಣ್ಣ ಪಾಠಗಳ ಸೇರ್ಪಡೆ

ಪಠ್ಯಪುಸ್ತಕ ಪರಿಷ್ಕರಣೆ: ಸರ್ಕಾರಕ್ಕೆ ವರದಿ ಸಲ್ಲಿಸಿದ ಬರಗೂರು
Last Updated 8 ಫೆಬ್ರುವರಿ 2017, 20:12 IST
ಅಕ್ಷರ ಗಾತ್ರ
ಬೆಂಗಳೂರು: ಶಾಲಾ ಪಠ್ಯಗಳಲ್ಲಿ ಹೊಸದಾಗಿ ಬಸವಣ್ಣ, ಸಂಗೊಳ್ಳಿ ರಾಯಣ್ಣ, ಸಾವಿತ್ರಿ ಬಾ ಫುಲೆ ಕುರಿತ ಪಾಠಗಳನ್ನು ಹೊಸದಾಗಿ ಸೇರ್ಪಡೆ ಮಾಡಿ, ನಕಾರಾತ್ಮಕ ಸಂದೇಶ ಬೀರುತ್ತಿದ್ದ ಕೆಲವು ಪಾಠಗಳನ್ನು ಕೈಬಿಡಲಾಗಿದೆ. 
 
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಅವರು ಪಠ್ಯಪುಸ್ತಕ ಪರಿಷ್ಕರಣೆ ಕುರಿತಂತೆ ಪೂರ್ಣ ವಿವರಗಳನ್ನು ಒಳಗೊಂಡಿರುವ ವರದಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರಿಗೆ ಸಲ್ಲಿಸಿದ್ದಾರೆ. 
 
ಪರಿಷ್ಕರಣೆ ಕುರಿತ ಮುಖ್ಯ ಅಂಶಗಳು ಹೀಗಿವೆ. 
 
12ನೇ ಶತಮಾನದಲ್ಲಿ ಧಾರ್ಮಿಕ ಸಾಮಾಜಿಕ ನ್ಯಾಯ ಬಿತ್ತಿದ ‘ಬಸವಣ್ಣನವರ ಜೀವನ ದರ್ಶನ’ ಪಾಠವನ್ನು ಕನ್ನಡ ಪಠ್ಯಕ್ಕೆ ಸೇರಿಸಲಾಗಿದೆ. ಸ್ವಾತಂತ್ರ್ಯ ಹೋರಾಟದ ಆಶಯಕ್ಕಾಗಿ ‘ಸಂಗೊಳ್ಳಿ ರಾಯಣ್ಣ’ನನ್ನು ಪರಿಚಯಿಸುವ ಪಾಠವಿದೆ. ಮಹಿಳೆಯರಿಗೆ ಶಿಕ್ಷಣ ನೀಡಲು ದುಡಿದ ಸಾವಿತ್ರಿ ಬಾ ಫುಲೆ ಅವರ ಜೀವನ ಕುರಿತ  ಪಾಠವೂ ಸೇರ್ಪಡೆಯಾಗಿದೆ.
 
 ‘ಕನ್ನಡದ ಆಸ್ತಿ’ ಎಂದು ಕರೆಯುವ ಮಾಸ್ತಿ ವೆಂಕಟೇಶ ಅಯ್ಯಂಗಾರರ ಒಂದು ರಚನೆಯೂ ಕನ್ನಡ ಪಠ್ಯ ಪುಸ್ತಕಗಳಲ್ಲಿ ಇರಲಿಲ್ಲ. ಅವರು ಬುದ್ಧನ ಬದುಕು ಆಧರಿಸಿ ಬರೆದ ‘ಯಶೋಧರ’ ನಾಟಕದ ಒಂದು ಭಾಗವನ್ನು ಅಳವಡಿಸಲಾಗಿದೆ. ನವ್ಯ ಕಾವ್ಯ ಪ್ರವರ್ತಕ ಗೋಪಾಲಕೃಷ್ಣ ಅಡಿಗರ ‘ಕಟ್ಟುವೆವು ನಾವು ನಾಡೊಂದನು ರಸದ ಬೀಡೊಂದನು’ ಎಂಬ ಪದ್ಯವನ್ನೂ ಸೇರಿಸಲಾಗಿದೆ.
 
ಹೈದರಾಬಾದ್‌–ಕರ್ನಾಟಕಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲು ಸಿದ್ದಯ್ಯ ಪುರಾಣಿಕ, ಶಾಂತರಸ, ಸಿಂಪಿ ಲಿಂಗಣ್ಣ, ಚೆನ್ನಣ್ಣ ವಾಲೀಕಾರ, ಜಂಬಣ್ಣ ಅಮರಚಿಂತ ಮುಂತಾದವರ ರಚನೆಗಳನ್ನು ವಿವಿಧ ತರಗತಿಗಳ ಪಠ್ಯದಲ್ಲಿ ಸೇರಿಸಲಾಗಿದೆ. ಮುಂಬೈ– ಕರ್ನಾಟಕದ ಬರಹಗಾರರ ರಚನೆಗಳನ್ನೂ ಅಳವಡಿಸಲಾಗಿದೆ.
6ನೇ ತರಗತಿಯ ಇಂಗ್ಲಿಷ್‌ ಪಠ್ಯದಿಂದ ‘ಬ್ಲೇಡ್‌ ರನ್ನರ್‌’ ಪಾಠ ಕೈಬಿಡಲಾಗಿದೆ. ಇದರ ನಾಯಕ ಆಸ್ಕರ್‌ ಲಿಯೋನಾರ್ಡ್‌ ಕಾರ್ಲ್‌ಪಿಸ್ಟೋರಿಯಸ್‌ ತನ್ನ ಗೆಳತಿಯನ್ನು ಕೊಲೆ ಮಾಡಿದ ಅಪರಾಧಿಯಾಗಿದ್ದ.
 
ಕನ್ನಡೇತರ ಭಾಷಾ ಪಠ್ಯಗಳಲ್ಲಿ ಒಂದಾದರೂ ಕನ್ನಡ ಸಾಹಿತ್ಯ ಪಾಠಗಳಿರಬೇಕು ಎಂಬ ಉದ್ದೇಶದಿಂದ ವಿ.ಕೃ. ಗೋಕಾಕ್‌ ಅವರ ‘ದಿ ಸಾಂಗ್‌ ಆಫ್‌ ಇಂಡಿಯಾ’ ಪದ್ಯ ಸೇರಿಸಲಾಗಿದೆ.
 
**
ಹೊಸ ಪಠ್ಯದಲ್ಲಿ ಏನೇನಿದೆ?
* ಅಕ್ಕಮಹಾದೇವಿ ಕುರಿತು ಸಂಸ್ಕೃತ ಪಠ್ಯದ 8ನೇ ತರಗತಿಗೆ ಮತ್ತು ಬಸವೇಶ್ವರರ ಕುರಿತು 7ನೇ ತರಗತಿ ಪಠ್ಯಗಳಲ್ಲಿ ಪಾಠಗಳನ್ನು ಸೇರಿಸಲಾಗಿದೆ.

* ತಮಿಳು 10ನೇ ತರಗತಿ ಪಠ್ಯ ಪುಸ್ತಕದಲ್ಲಿ ಆದಿಕವಿ ಪಂಪನ ಪರಿಚಯಿಸುವ ಪಾಠವಿದೆ.

* ‘ಭಾಷಾ ಬಾಂಧವ್ಯ’ ಕುರಿತ ಪಾಠ ಮರಾಠಿ ಪಠ್ಯದಲ್ಲಿ ಸೇರ್ಪಡೆ ಆಗಿದೆ.

* ಹಿಂದಿಯ 7ನೇ ತರಗತಿಯಲ್ಲಿ ‘ಅಪ್ನಾ ಕರ್ನಾಟಕ’ ಎಂಬ ಪಾಠ ಅಳವಡಿಕೆ ಮಾಡಲಾಗಿದೆ.

* 7ನೇ ತರಗತಿಯಲ್ಲಿ  ತುಳು ಪಠ್ಯದಲ್ಲಿ ನಾರಾಯಣಗುರು ಜೀವನ ಕುರಿತು ಒಂದು ಪಾಠ. ಹಣ್ಣು ಮಾರಿ ಶಾಲೆ–ಕಾಲೇಜು ಕಟ್ಟಿಸಿದ ಹಾಜಬ್ಬ ಅವರ ಪರಿಚಿಯಿಸುವ ಪಾಠ 8ನೇ ತರಗತಿ ಪಠ್ಯಕ್ಕೆ ಸೇರಿಸಲಾಗಿದೆ.

* ರಾಷ್ಟ್ರೀಯ ಭಾವೈಕ್ಯತೆ ಕುರಿತ ಪಾಠ ಉರ್ದು ಪಠ್ಯದಲ್ಲಿದೆ.

* 7ನೇ ತರಗತಿಯ ಸಮಾಜವಿಜ್ಞಾನ ಪಠ್ಯದಲ್ಲಿ ‘ಭಕ್ತಿ ಪಂಥ’ ಪಾಠದ ಜೊತೆಗೆ ‘ಸೂಫಿ ಪಂಥ’ವನ್ನೂ ಸೇರಿಸಲಾಗಿದೆ.

* 8ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ‘ಮಾನವ ಹಕ್ಕುಗಳು’ ಕುರಿತು ಪಾಠವಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನೇಮಕಾತಿ ಆಯೋಗಗಳು, ಆಯ್ಕೆ ಪ್ರಕ್ರಿಯೆ, ಆಡಳಿತ ವಿಧಾನಗಳನ್ನು ಪರಿಚಯಿಸುವ ಪಾಠಗಳಿವೆ.

* 1ರಿಂದ 7ನೇ ತರಗತಿಯ ಗಣಿತ ಪುಸ್ತಕಗಳಲ್ಲಿ ಚಿತ್ರಗಳ ಸಮಂಜಸತೆಗಾಗಿ ಬದಲಾವಣೆ ಗಳನ್ನು ಮಾಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ತರಗತಿಗಳಲ್ಲಿ ಕ್ಲಿಷ್ಟಕರ ಎನಿಸುವ ಪಾಠಗಳನ್ನು ತೆಗೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT