ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆಗೆ ರಾಜಕೀಯ ಒತ್ತಡ ಕಾರಣ?

ಅಕ್ರಮಗಳ ಸುಳಿವು ಸಿಕ್ಕು ಬೇಸರಗೊಂಡಿದ್ದ ಕುಲಪತಿ ಡಾ.ಕೆ.ಚಿನ್ನಪ್ಪಗೌಡ
Last Updated 10 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹಾವೇರಿ: ‘ಅರ್ಹತೆ’ ಇಲ್ಲದವರನ್ನು ವಿಶ್ವವಿದ್ಯಾಲಯದಲ್ಲಿ ಮುಂದುವರಿಸಲು ಸತತ ರಾಜಕೀಯ ಒತ್ತಡ ಹಾಗೂ ಕೆಲ ಸಿಬ್ಬಂದಿ ಹಿಂದಿನಿಂದಲೂ ನಡೆಸಿಕೊಂಡ ಬಂದ ಅಕ್ರಮಗಳ ಸುಳಿವು ಸಿಕ್ಕಿ ಬೇಸರಗೊಂಡ ಡಾ. ಕೆ.ಚಿನ್ನಪ್ಪಗೌಡ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಹಂಪಿ ವಿಶ್ವವಿದ್ಯಾಲಯದಲ್ಲಿ ಉಪಕುಲಸಚಿರಾಗಿದ್ದ (ಬೋಧಕೇತರ) ಡಾ. ಕೆ ಪ್ರೇಮ್‌ಕುಮಾರ್‌ ಮೂರು ವರ್ಷದ ನಿಯೋಜನೆ ಮೇರೆಗೆ ಜಾನಪದ ವಿಶ್ವವಿದ್ಯಾಲಯಕ್ಕೆ ಬಂದಿದ್ದರು. ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿಯು 2014ರ ಏಪ್ರಿಲ್‌ 11ರಂದು ಅವರಿಗೆ ಹಿರಿಯ ಸಂಶೋಧನಾ ಅಧಿಕಾರಿ ಹಾಗೂ ನಿರ್ದೇಶಕರಾಗಿ ಬಡ್ತಿ ನೀಡಿತ್ತು.

ಆದರೆ, ನಿಯಮದ ಪ್ರಕಾರ ಬೋಧಕೇತರ ಹುದ್ದೆಯಿಂದ ಬೋಧಕ ಹುದ್ದೆಗೆ ವಿಲೀನಗೊಳಿಸಲು ಅವಕಾಶವಿಲ್ಲ. ಹಾಗಾಗಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿತ್ತು. ಆದರೆ, ನ್ಯಾಯಾಲಯದ ಮೆಟ್ಟಿಲೇರಿದ ಪ್ರೇಮ್‌ಕುಮಾರ್, ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

‘ಈ ಪ್ರಕರಣದ ತೀರ್ಪು ಕೆಲವೇ ದಿನಗಳಲ್ಲಿ ಬರುವ ನಿರೀಕ್ಷೆ ಇದೆ. ಪ್ರೇಮ್‌ಕುಮಾರ್‌ ಅವರನ್ನು ಈ ಹುದ್ದೆಯಿಂದ ಬಿಡುಗಡೆ ಮಾಡಬಾರದು ಎಂದು ಚಿನ್ನಪ್ಪ ಗೌಡ ಅವರ ಮೇಲೆ ಪ್ರಭಾವಿ ರಾಜಕಾರಣಿಗಳು, ಹಿರಿಯ ಸಾಹಿತಿಯೊಬ್ಬರು ತೀವ್ರ ಒತ್ತಡ ಹೇರಿದ್ದರು’ ಎನ್ನಲಾಗಿದೆ.

‘ಆದರೆ ಇದಕ್ಕೆ ಒಪ್ಪದೇ, ‘ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇನೆ’ ಎಂದು ಅವರು ಹೇಳಿದ್ದರಿಂದ ಕುಪಿತರಾದ ಕೆಲವರು ಅವರ ಮೇಲೇ ವಾಗ್ದಾಳಿ ನಡೆಸಿದ್ದರು. ಒಂದು ವೇಳೆ, ನ್ಯಾಯಾಲಯವು ಪ್ರೇಮ್‌ಕುಮಾರ್‌ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶ ನೀಡಿದಲ್ಲಿ, ‘ಆದೇಶದ ಪಾಲನೆ’ ಅಥವಾ ‘ಪ್ರಭಾವಿಗಳ ಒತ್ತಡ’ದ  ಅಡಕತ್ತರಿಯಲ್ಲಿ ಸಿಲುಕಿಕೊಳ್ಳುವ ಅಪಾಯ ಇತ್ತು. ಹಾಗಾಗಿ ಈ ತಂಟೆ ಬೇಡ ಎಂದು ಅವರು ರಾಜೀನಾಮೆ ನೀಡಿದ್ದಾರೆ’ ಎಂದು ಅವರ ಸಮೀಪವರ್ತಿ ಮೂಲಗಳು ತಿಳಿಸಿವೆ.

ಸಿ.ಡಿ ಪ್ರಕರಣ: ‘ವಿದ್ಯಾರ್ಥಿನಿ ಜೊತೆ ಅಶ್ಲೀಲ ವರ್ತನೆ’ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಶಾಹ್‌ಜಹಾನ್ ಮುದಕವಿ ವಿರುದ್ಧ ವಿಶ್ವವಿದ್ಯಾಲಯ ಕೆಲವರು ಮಾಧ್ಯಮಕ್ಕೆ ‘ಸಿ.ಡಿ’ ಬಿಡುಗಡೆ ಮಾಡಿದ್ದರು. ‘ಅದು, ಯಾವುದೇ ವಿದ್ಯಾರ್ಥಿನಿ ಜೊತೆಗಿನ ಅಶ್ಲೀಲ ವರ್ತನೆ ಅಲ್ಲ. 2011ರಲ್ಲಿ ನನ್ನ ಪತ್ನಿ ಜೊತೆಗಿದ್ದ ದೃಶ್ಯ. ಇದಕ್ಕೂ ವಿಶ್ವವಿದ್ಯಾಲಯಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಮುದಕವಿ ಸ್ಪಷ್ಟಪಡಿಸಿದ್ದರು. ಇದರಿಂದ ಸಿ.ಡಿ ನೀಡಿದವರೇ ಮುಜುಗರಕ್ಕೆ ಈಡಾಗಿದ್ದರು.

ಕುಲಪತಿಗಳು ಆಡಳಿತದಲ್ಲಿ ಶಿಸ್ತು ತರಲು ಆರಂಭಿಸಿದ ಪರಿಣಾಮ ಸಿಕ್ಕಿಹಾಕಿಕೊಂಡ ಸಿಬ್ಬಂದಿಯೇ ವಿಶ್ವವಿದ್ಯಾಲಯದ ಹೆಸರಿಗೆ ಕಪ್ಪು ಮಸಿ ಬಳಿಯಲು ‘ಸಿ.ಡಿ’ ಪ್ರಹಸನ ನಡೆಸಿದ್ದರು ಎನ್ನಲಾಗಿದೆ. ಅಲ್ಲದೇ, ‘ಸಿ.ಡಿ ಬಿಡುಗಡೆಗೂ ಮುನ್ನ ಅದನ್ನು ಕುಲಪತಿ ಅವರಿಗೆ  ತೋರಿಸಲಾಗಿತ್ತು’ ಎಂದೂ ಹೇಳಿದ್ದುದು ಚಿನ್ನಪ್ಪಗೌಡರನ್ನು ಗಾಸಿಗೊಳಿಸಿತ್ತು ಎಂದು ಹೇಳಿವೆ.

‘ಶೈಕ್ಷಣಿಕ ಅರ್ಹತೆ’ ಇಲ್ಲದೇ ನಿಯೋಜನೆಗೊಂಡವರು, ಕೆಳಹಂತದ ಸಿಬ್ಬಂದಿ ನಡೆಸಿರುವ ಹಲವಾರು ಅಕ್ರಮಗಳು ಹಾಗೂ ವಿಶ್ವವಿದ್ಯಾಲಯದ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿರುವವರ ಪರವಾಗಿ ಪ್ರಭಾವಿ ರಾಜಕೀಯ ಮುಖಂಡರು ಲಾಬಿ ನಡೆಸಿರುವುದು ಅವರಿಗೆ ನೋವು ತಂದಿತ್ತು.

ಈ ವಿಚಾರದಲ್ಲಿ ವಿಧಾನಪರಿಷತ್ ಸದಸ್ಯರೊಬ್ಬರು, ‘ಅರ್ಹತೆ ಇಲ್ಲದವರಿಗೆ ನೀವೇನು ಸಂಬಳ ನೀಡುತ್ತೀರಾ? ಅವರು ಮುಂದುವರಿದರೆ ನಿಮಗೇನು?’ ಎಂದು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಕೆಲ ಸಚಿವರ ಹೆಸರಿನಲ್ಲಿ ಬೆಂಬಲಿಗರೂ ಒತ್ತಡ ಹಾಕಿದ್ದರು ಎಂದು ತಿಳಿದುಬಂದಿದೆ.

ಈ ಎಲ್ಲ ಬೆಳವಣಿಗೆಗಳಿಂದಾಗಿ ಕುಲಪತಿಯವರ ರಕ್ತದೊತ್ತಡದಲ್ಲಿ ಈಚೆಗೆ ಏರುಪೇರಾಗಿತ್ತು. ‘ತಿನ್ನದ ಎಂಜಲನ್ನು ಮುಖಕ್ಕೆ ಮೆತ್ತಿಕೊಳ್ಳುವ ಮೊದಲು ಹೊರನಡೆಯುವುದೇ ಸೂಕ್ತ’ ಎಂದು ನಿರ್ಧರಿಸಿ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT