ಗೋಣಿಕೊಪ್ಪಲು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಬಾಚಿಮಂಡ ಸುವಿನ್ ಗಣಪತಿ, ಉಪಾಧ್ಯಕ್ಷರಾಗಿ ಕಳ್ಳೆಂಗಡ ಬಾಲಕೃಷ್ಣ ಅವಿರೋಧವಾಗಿ ಆಯ್ಕೆಯಾದರು.
ಎಪಿಎಂಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುವಿನ್ ಗಣಪತಿ, ಉಪಾಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಹೊರತುಪಡಿಸಿ ಇತರರು ನಾಮಪತ್ರ ಸಲ್ಲಿಸಿರಲಿಲ್ಲ.
ಸುವಿನ್ ಗಣಪತಿ ಅವರ ಹೆಸರನ್ನು ಆದೇಂಗಡ ವಿನು ಚಂಗಪ್ಪ ಸೂಚಿಸಿದರು. ಅಜ್ಜಿಕುಟ್ಟೀರ ಪ್ರವೀಣ್ ಅನುಮೋದಿಸಿದರು. ಬಾಲಕೃಷ್ಣ ಹೆಸರನ್ನು ಮಾಚಂಗಡ ಸುಜಾ ಪೂಣಚ್ಚ ಸೂಚಿಸಿದರು. ಚಿಯಕ್ಪೂವಂಡ ಜಿ.ಸುಬ್ರಮಣಿ ಅನುಮೋದಿಸಿದರು.
ಸಮಿತಿಯ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ಜಯಗಳಿಸಿದ್ದರು. ಸದಸ್ಯರಾದ ಕೆ.ಯು. ಭೀಮಣಿ, ಜೆ.ಕೆ.ಅಯ್ಯಪ್ಪ, ಹೆಚ್.ಎನ್. ಮೋಹನ್ ರಾಜ್, ನಾಮೇರ ಧರಣಿ, ಅಜ್ಜಿಕುಟ್ಟೀರ ಎಂ. ಮುತ್ತಪ್ಪ, ಬೊಳ್ಳಜೀರ ಸುಶೀಲಾ, ನಾಮ ನಿರ್ದೇಶಕರಾದ ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ ,ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಅರುಣ್ ಭೀಮಯ್ಯ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್,ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಹಾಜರಿದ್ದರು.
ತಹಶೀಲ್ದಾರ್ ಮಹದೇವಸ್ವಾಮಿ ಚುನಾವಣಾಧಿಕಾರಿ ಆಗಿದ್ದರು. ಎಪಿಎಂಸಿ ಕಾರ್ಯದರ್ಸಿ ಮಹೇಶ್ ಇದ್ದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅಧ್ಯಕ್ಷ ಸುವಿನ್ ಗಣಪತಿ, ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.