ಅತಿಥಿ ಉಪನ್ಯಾಸಕರಿಗೆ ಸೇವೆ ಕಾಯಂ, ಸೇವಾ ಭದ್ರತೆ ಸೇರಿದಂತೆ ಯಾವ ಸವಲತ್ತು ಸರ್ಕಾರ ನೀಡಿಲ್ಲ. ವರ್ಷದಲ್ಲಿ ಕೇವಲ 10 ತಿಂಗಳ ವೇತನ ನೀಡಲಾಗುತ್ತಿದೆ. ಮೂರ್ನಾಲ್ಕು ತಿಂಗಳಿಗೆ ಒಮ್ಮೆ ವೇತನ ಬಟವಾಡೆ ಮಾಡಲಾಗುತ್ತಿದೆ. ಇದರಿಂದ ಜೀವನ ಸಾಗಿಸಲು ತ್ರಾಸದಾಯಕವಾಗಿದ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅತಿಥಿ ಉಪನ್ಯಾಸಕ ನಾಗೇಂದ್ರಪ್ಪ ಮಾತನಾಡಿ, ನೆರೆಯ ರಾಜ್ಯಗಳಲ್ಲಿ ಮಾಸಿಕ ₹ 20 ಸಾವಿರಕ್ಕಿಂತಲೂ ಹೆಚ್ಚಿನ ವೇತನ ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ ಎಂದರು.
ಸೇವಾ ಹಿರಿತನ ಆಧರಿಸಿ ಕಾಯಂಗೊಳಿಸಬೇಕು ಎಂದು ಹಲವು ಬಾರಿ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಪ್ರತಿಭಟನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳು, ಸಚಿವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಉಪನ್ಯಾಸಕರಾದ ನಾಗೇಂದ್ರಪ್ಪ, ಹನುಮಂತರಾಯಪ್ಪ, ಧನಂಜಯ, ನಾಗೇಶ, ಅಶ್ವಿನಿ, ಶ್ರೀನಿವಾಸ, ಅಶ್ವತಮ್ಮ, ಗೋಪಾಲರೆಡ್ಡಿ, ಚಂದ್ರಶೇಖರ್ ಪ್ರತಿಭಟನೆಯಲ್ಲಿ ಇದ್ದರು.