‘ನಮ್ ಏರಿಯಾಲ್ ಒಂದಿನ’, ‘ತುಘಲಕ್’ ಚಿತ್ರಗಳ ನಂತರ ಒಂದಷ್ಟು ದಿನ ಸುಮ್ಮನಿದ್ದ ಅರವಿಂದ್ ಕೌಶಿಕ್ ಮತ್ತೆ ಸಿನಿಮಾ ಮಾಡಿದ್ದಾರೆ. ಅವರ ನಿರ್ದೇಶನದ ಹೊಸ ಚಿತ್ರ ‘ಹುಲಿರಾಯ’ದ ಟ್ರೇಲರ್ ಮತ್ತು ಪೋಸ್ಟರ್ಗಳನ್ನು ಪ್ರದರ್ಶಿಸಲು ಚಿತ್ರತಂಡ ಮಾಧ್ಯಮದ ಎದುರು ಹಾಜರಾಗಿತ್ತು.
ದಟ್ಟ ಅರಣ್ಯದಲ್ಲಿ ಹುಟ್ಟಿ ಬೆಳೆದ ಹುಡುಗನ ಸುತ್ತ ಕಥೆ ಹೆಣೆಯಲಾಗಿದೆ. ವ್ಯಕ್ತಿಯೊಬ್ಬ ಎಲ್ಲಾ ಅಡೆತಡೆಗಳನ್ನೂ ಮೀರಿ ತನ್ನತನವನ್ನು ಕಂಡುಕೊಳ್ಳಲು ನಡೆಸುವ ಹೋರಾಟ, ಸ್ವಾತಂತ್ರ್ಯದ ಬಗೆಗಿನ ತುಡಿತವನ್ನು ರೂಪಕಗಳ ಮೂಲಕ ಹೇಳಲು ನಿರ್ದೇಶಕರು ಪ್ರಯತ್ನ ಪಟ್ಟಿದ್ದಾರೆ. ಮಹಾನಗರದ ಛಾಯೆಯೂ ಚಿತ್ರದಲ್ಲಿ ಇರಲಿದೆ.
ಕೆ.ಎನ್. ನಾಗೇಶ್ ಕೋಗಿಲು ಚಿತ್ರದ ನಿರ್ಮಾಪಕರು. ಬಾಲು ನಾಗೇಂದ್ರ ನಾಯಕ. ದಿವ್ಯಾ, ಚಿರಶ್ರೀ, ನವರಸ ರಾಮಕೃಷ್ಣ, ರಘು ಪಾಂಡೇಶ್ವರ್ ತಾರಾಗಣದಲ್ಲಿದ್ದಾರೆ. ರವೀಶ್ ಛಾಯಾಗ್ರಹಣ, ಶಶಾಂಕ್ ಸಂಕಲನ, ಅರ್ಜುನ್ ರಾಮು ಸಂಗೀತ ಸಂಯೋಜನೆ ಇದೆ.
ಮೂವತ್ತೈದು ಸೆಕೆಂಡುಗಳ ಮೋಷನ್ ಪೋಸ್ಟರ್ ವಿನ್ಯಾಸಕ್ಕೆ ಸಂತೋಷ್ ರಾಧಾಕೃಷ್ಣ ಅವರು ಒಂದು ತಿಂಗಳ ಅವಧಿ ತೆಗೆದುಕೊಂಡಿದ್ದಾರೆ. ಸ್ಟುಡಿಯೊದಲ್ಲಿ ಒಬ್ಬರೇ ಕುಳಿತು ಈ ಕೆಲಸವನ್ನು ಪೂರ್ಣಗೊಳಿಸಿದ್ದಾರಂತೆ ಅವರು.