‘ನಾಳೆಯೇ ಎಲ್ಲರೂ ಪರೀಕ್ಷಾ ಶುಲ್ಕ ಪಾವತಿಸಬೇಕು’ ಎಂದು ನಮ್ಮ ಶಿಕ್ಷಕರೊಬ್ಬರು ಇತ್ತೀಚೆಗೆ ಹೇಳಿದಾಗ ನನ್ನ ಗೆಳತಿ ಬೆಚ್ಚಿಬಿದ್ದಳು. ಯಾಕೆ ಎಂದು ಕೇಳಿದಾಗ ‘ನನ್ನ ಹತ್ತಿರ ಹಣವಿಲ್ಲ. ಅಪ್ಪಂಗೆ ಹುಷಾರಿಲ್ಲ. ಬಳ್ಳಾರಿಯಿಂದ ಇಲ್ಲಿಗೆ ಬಂದು ಅವರು ಹಣ ಕೊಡೋಕೆ ಆಗಲ್ಲ. ಏನ್ ಮಾಡೋದು’ ಎಂದಳು.
ನಾವೆಲ್ಲ ಗೆಳತಿಯರು ಅವಳಿಗೆ ಸಮಾಧಾನ ಮಾಡಿ, ಅವಳ ಅಮ್ಮನಿಗೆ ಫೋನ್ ಮಾಡಿ ‘ನೀವೇನೂ ಇಲ್ಲಿಗೆ ಬರೋದು ಬೇಡ, ಅವಳ ಅಕೌಂಟ್ಗೆ ಹಣ ಹಾಕಿ. ನಾವು ಇಲ್ಲಿ ತೆಗೆದುಕೊಳ್ತೀವಿ’ ಎಂದು ಹೇಳಿದೆವು. ಅವಳಮ್ಮ ಹಾಗೇ ಮಾಡಿದರು. ನಾನು ಮತ್ತು ಗೆಳತಿ ಮುಂಜಾನೆ, ಬೆಂಗಳೂರಿನ ಜಯನಗರ ಮೂರನೇ ಹಂತದಲ್ಲಿರುವ ಏಳು ಎಟಿಎಂಗಳಿಗೆ ಎಡತಾಕಿದರೂ ಒಂದರಲ್ಲೂ ಹಣ ಬರಲಿಲ್ಲ. ಕೊನೆಗೆ ಎಲ್ಲ ಗೆಳತಿಯರೂ ಸೇರಿ ಅವಳ ಪರೀಕ್ಷಾ ಶುಲ್ಕ ಕಟ್ಟಿದೆವು.
ಖಾತೆದಾರರು ವಾರಕ್ಕೆ ₹ 24,000 ಪಡೆಯಬಹುದೆಂದು ಆರ್ಬಿಐ ಹೇಳಿದೆ. ಆದರೆ ಎಲ್ಲಾ ಎಟಿಎಂಗಳಲ್ಲೂ ಹಣವಿದೆಯೇ ಎಂದು ಪರೀಕ್ಷಿಸಬೇಡವೇ? ಕೂಡಲೇ ಬ್ಯಾಂಕ್ಗಳು ಗಮನಹರಿಸಿ ಎಲ್ಲಾ ಎಟಿಎಂಗಳಲ್ಲೂ ಹಣ ಹಾಕಿ, ಅವು ಚಾಲ್ತಿಯಲ್ಲಿರುವಂತೆ ಮಾಡಬೇಕು. ನೋಟು ರದ್ದತಿಯಿಂದ ಪೆಟ್ಟು ತಿಂದಿರುವ ಜನ, ಈಗಲಾದರೂ ಸುಧಾರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು.
- ರಮ್ಯ ಎಸ್., ಹೊನ್ನಾವರ, ದೊಡ್ಡಬಳ್ಳಾಪುರ ತಾಲ್ಲೂಕು