ನವದೆಹಲಿ (ಪಿಟಿಐ): ಇದುವರೆಗೆ (2015 ಏಪ್ರಿಲ್ 1ರವರೆಗೆ) ಒಟ್ಟಾರೆ 3.3 ಕೋಟಿಯಷ್ಟು ನಕಲಿ ಎಲ್ಪಿಜಿ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಇದರಿಂದ ಸರ್ಕಾರಕ್ಕೆ ₹21 ಸಾವಿರ ಕೋಟಿ ಸಬ್ಸಿಡಿ ಉಳಿತಾಯವಾಗಿದೆ ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
‘ನಾವು ಅಧಿಕಾರಕ್ಕೆ ಬಂದಾಗ (2014ರಲ್ಲಿ) ಎಲ್ಪಿಜಿ ಸಬ್ಸಿಡಿ ದುರ್ಬಳಕೆ ತಡೆಯುವ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಶ್ರೀಮಂತರು ಮತ್ತು ಮಧ್ಯಮ ವರ್ಗದವರೂ ಎಲ್ಪಿಜಿ ಸಬ್ಸಿಡಿ ಪಡೆಯುತ್ತಿರುವುದು ಗಮನಕ್ಕೆ ಬಂದಿತು’ ಎಂದು ಅವರು ತಿಳಿಸಿದ್ದಾರೆ.
'ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಕ್ಕೆ ಬಹಳಷ್ಟು ಎಲ್ಪಿಜಿ ಸಂಪರ್ಕಗಳು ಮತ್ತು ಎಲ್ಪಿಜಿ ಸಬ್ಸಿಡಿ ದುರ್ಬಳಕೆ ಆಗುತ್ತಿರುವುದು
ಪತ್ತೆಯಾಗಿದೆ’ ಎಂದು ಸಚಿವರು ತಿಳಿಸಿದರು.
ವಿಶ್ವ ಎಲ್ಪಿಜಿ ಒಕ್ಕೂಟ ಇಲ್ಲಿ ಆಯೋಜಿಸಿದ್ದ ಏಷ್ಯಾ ಎಲ್ಪಿಜಿ ಶೃಂಗಸಭೆಯಲ್ಲಿ ಅವರು ಮಾತನಾಡಿದರು. ‘2014ರಲ್ಲಿ ಎಲ್ಪಿಜಿ ಸಬ್ಸಿಡಿ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಇದರಿಂದ ಸಬ್ಸಿಡಿ ಸೋರಿಕೆ ತಡೆಯು ವಂತಾಯಿತು. ಅಲ್ಲದೆ ನಕಲಿ ಖಾತೆಯ ಮೂಲಕ ಯೋಜನೆ ದುರ್ಬಳಕೆಯನ್ನೂ ತಪ್ಪಿಸಲು ಅನುಕೂಲವಾಯಿತು’ ಎಂದರು.