ವಿಟ್ಲ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಸಂದೇಶಗಳ ಮಹತ್ವ ಕೇವಲ ಒಂದು ಜಾತಿಗೆ ಸೀಮಿತವಾಗಿರದೇ, ಸರ್ವ ಸಮಾಜದ ಪರಿವರ್ತನೆಗೆ ಕಾರಣವಾಗಿದೆ. ಯುವಶಕ್ತಿ ಸಮಾಜದ ಸದು ದ್ದೇಶಕ್ಕಾಗಿ ವಿನಿಯೋಗವಾದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಉದ್ಯಮಿ ರವಿ ಪೂಜಾರಿ ಚಿಲಿಂಬಿ ತಿಳಿಸಿದರು.
ಅವರು ವಿಟ್ಲ ಶಿವಗಿರಿಯಲ್ಲಿ ಭಾನುವಾರ ವಿಟ್ಲ ಯೂತ್ ಬಿಲ್ಲವ ಅಸೋಸಿ ಯೇಶನ್ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಯೂತ್ ಬಿಲ್ಲವ ಅಸೋಸಿಯೇಶನ್ ವಾರ್ಷಿಕೋತ್ಸವದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ನಿವೃತ್ತ ಯೋಧರನ್ನು ಸನ್ಮಾನಿಸಿ ಮಾತನಾಡಿದರು.
ಜಾತಿ ಸಂಘಟನೆಯನ್ನು ಗಟ್ಟಿಗೊಳಿಸುವುದರೊಂದಿಗೆ, ಸರ್ವ ಸಮಾಜವನ್ನೂ ಪ್ರೀತಿಸುವ ಅವಶ್ಯಕತೆಯಿದೆ. ನಾರಾಯಣ ಗುರುಗಳು ನಡೆಸಿದ ಅಧ್ಯಾತ್ಮಿಕ, ಸಾಮಾಜಿಕ ಕ್ರಾಂತಿಯಿಂದ ಇಂದು ಹಿಂದುಳಿದ ವರ್ಗದ ಜನರು ಎಲ್ಲರೊಂದಿಗೆ ಸಮಾನ ಸ್ಥಾನಮಾನದಲ್ಲಿ ಬದುಕುತ್ತಿದ್ದಾರೆ ಎಂದು ತಿಳಿಸಿದರು.
ಗೌರವ ಸ್ವೀಕರಿಸಿದ ಬಿಲ್ಲವ ಸಮಾಜದ ಸಾಧಕ ಶತಾಯುಷಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇರಾಜೆ ಕೆ.ಪಿ.ಮದನ ಮಾಸ್ಟರ್ ಮಾತನಾಡಿ, ಯುವಶಕ್ತಿಯನ್ನು ಸ್ವಾರ್ಥಕ್ಕಾಗಿ ಬಳ ಸದೇ ದೇಶಕ್ಕಾಗಿ ಬದುಕುವಂತೆ ಪ್ರೇರೇ ಪಿಸಬೇಕು ಎಂದರು.
ವಿಟ್ಲ ಯೂತ್ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರಾಜೇಶ್ ಸುವರ್ಣ, ಭುವನೇಶ್ ಪಚ್ಚಿ ನಡ್ಕ, ಅನಿಲಕಟ್ಟೆ ಶಾಲಾ ಮುಖ್ಯ ಶಿಕ್ಷಕಿ ರಾಜೀವಿ ವೈ. ಬಂಗೇರ ಇನ್ನಿತರರು ಭಾಗವಹಿಸಿದ್ದರು. ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಸಂಜೀವ ಪೂಜಾರಿ, ಗೌರವಾಧ್ಯಕ್ಷೆ ಪುಷ್ಪಾ ಸುಂದರ ಪೂಜಾರಿ ವೇದಿಕೆಯಲ್ಲಿದ್ದರು.
ನಿವೃತ್ತ ಯೋಧರಾದ ರಾಜೀವ ಸುವರ್ಣ, ಬಾಬು ಪೂಜಾರಿ ಬಲ್ನಾಡು, ಬಾಲಕೃಷ್ಣ ಗೌಡ ಪೊನ್ನೆತ್ತಡಿ, ಮಾಧವ ಪೂಜಾರಿ ಕೆಂಗುಡೇಲು, ಸಂಜೀವ ಗೌಡ ಪೋಳ್ಯ, ಚಿದಾನಂದ ನಾಡಾಜೆ ಹಾಗೂ ನೃತ್ಯ ವಿದುಷಿ ನಯನಾ ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಇದೇ 19ರಂದು ಗೆಜ್ಜೆಗಿರಿ ನಂದನ ಬಿತ್ತಿಲ್ನಲ್ಲಿ ನಡೆಯುವ ದೇಯಿ ಬೈದೆತಿ ಮೂಲಸ್ಥಾನ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯದರ್ಶಿ ಜಯಂತ್ ಪೂರ್ಲಪ್ಪಾಡಿ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಹರೀಶ್ ಕೆ. ನಿರೂಪಿಸಿ, ವಂದಿಸಿದರು. ಮಾಜಿ ಅಧ್ಯಕ್ಷ ಸಂಜೀವ ಎಂ., ಜಗದೀಶ ಪಾಣೆ ಮಜಲು, ಜಯಪ್ರಕಾಶ್ ಪಾಣೆಮಜಲು ಸಹಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.