ಗುಡಿಬಂಡೆ: ತಾಲ್ಲೂಕಿನ ಎಲ್ಲೋಡು ದಲ್ಲಿ ಭಾನುವಾರ ನಡೆದ ಶ್ರೀಲಕ್ಷ್ಮಿ ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ತಹಶೀಲ್ದಾರ್ ಜಿ.ನಂಜಪ್ಪ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಪ್ರತಿ ವರ್ಷದಂತೆ ಮಾಘ ಮಾಸದಲ್ಲಿ ನಡೆಯುವ ಶ್ರೀಲಕ್ಷ್ಮಿ ಆದಿನಾರಾಯಣಸ್ವಾಮಿ ದೇವಸ್ಥಾನದಲ್ಲಿ ರಥೋತ್ಸದ ಅಂಗವಾಗಿ ಬೆಳಗಿನ ಜಾವದಿಂದಲೇ ವಿಶೇಷ ಪ್ರಾರ್ಥನೆ ಹಾಗೂ ಮಹಾಮಂಗಳಾರತಿ ನಡೆಯಿತು.
ಪ್ರಧಾನ ಅರ್ಚಕ ಎ. ಪ್ರಕಾಶ್ ಅವರ ಸಮ್ಮುಖದಲ್ಲಿ ಪಲ್ಲಕ್ಕಿಯಲ್ಲಿ ಶ್ರೀಲಕ್ಷ್ಮಿ ಆದಿನಾರಾಯಣಸ್ವಾಮಿ ಉತ್ಸವಮೂರ್ತಿಯನ್ನು ಮಂಗಳವಾದ್ಯ ಹಾಗೂ ಭಕ್ತರ ಜಯ ಘೋಷಗಳ ಮೂಲಕ ವಿವಿಧ ಹೂವುಗಳಿಂದ ಅಲಂಕೃತಗೊಂಡು ನಿಂತಿದ್ದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ರಾಜ್ಯ ಮತ್ತು ನೆರೆಯ ಆಂಧ್ರಪ್ರದೇಶ, ತಮಿಳುನಾಡಿನಿಂದ ಬಂದಿದ್ದ ಸಾವಿರಾರು ಭಕ್ತರ ಸಮೂಹ ಗೋವಿಂದ ಗೋವಿಂದ ಜಯ ಘೋಷಗಳೊಡನೆ ರಥವನ್ನು ಎಳೆದು ಭಕ್ತಿಭಾವ ಮೆರೆದರು.
ಮಜ್ಜಿಗೆ ಪಾನಕ ಪ್ರಸಾದ ವಿತರಣೆ: ಸುತ್ತಮುತ್ತಲಿ ಗ್ರಾಮಸ್ಥರು ಸಿಂಗರಿಸಿದ ಎತ್ತಿನ ಗಾಡಿಗಳಲ್ಲಿ ಮಜ್ಜಿಗೆ ಪಾನಕ ತಂದು ವಿತರಿಸಿದರು.
ಆರ್ಯವೈಶ್ಯ, ಬ್ರಾಹ್ಮಣರ, ಸೇರಿದಂತೆ ಇತರೆ ಸಂಘದವರು ಅನ್ನದಾಸೋಹವನ್ನು ಏರ್ಪಡಿಸಿದ್ದರು. ಭಕ್ತರು ಹಣ್ಣು, ದವನವನ್ನು ರಥಕ್ಕೆ ಎಸೆದು ಭಕ್ತಿ ಭಾವವನ್ನು ಪ್ರದರ್ಶಿಸಿದರು. ಜಾತ್ರೆ, ರಥೋತ್ಸವದ ಅಂಗವಾಗಿ ಈ ಬಾರಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.