ಮುಂಬೈ (ಪಿಟಿಐ): ಸತತ ಎರಡನೇ ದಿನವೂ ಇನ್ಫೊಸಿಸ್ನ ಅಧ್ಯಕ್ಷ ಶೇಷಸಾಯಿ ಮತ್ತು ಸಿಇಒ ವಿಶಾಲ್ ಸಿಕ್ಕಾ ಅವರು ಹೂಡಿಕೆದಾರರ ಆತಂಕ ದೂರ ಮಾಡುವ ಪ್ರಯತ್ನ ನಡೆಸಿದ್ದಾರೆ.
ಆಡಳಿತ ನಿರ್ವಹಣೆ ಕುರಿತು ಇನ್ಫೊಸಿಸ್ ಸಹ ಸ್ಥಾಪಕರ ಜತೆಗಿನ ವಿವಾದದಿಂದ ವಿಚಲಿತಗೊಂಡಿಲ್ಲ ಎಂಬುದನ್ನು ನಿರ್ದೇಶಕ ಮಂಡಳಿಯು ಹೂಡಿಕೆದಾರರಿಗೆ ಮನವರಿಕೆ ಮಾಡುವ ಪ್ರಯತ್ನ ಮುಂದುವರೆಸಿದೆ.
‘ಸಂಸ್ಥೆಯ ಹಲವಾರು ಗ್ರಾಹಕರು ನಮ್ಮನ್ನು ಬೆಂಬಲಿಸಿ ಇ–ಮೇಲ್ ಕಳಿಸಿದ್ದಾರೆ. ಯಾರೊಬ್ಬರೂ ಆಡಳಿತ ವೈಫಲ್ಯದತ್ತ ಬೊಟ್ಟು ಮಾಡಿಲ್ಲ’ ಎಂದು ಸಿಕ್ಕಾ ಹೇಳಿದ್ದಾರೆ.
ಮಾಜಿ ಸಿಎಫ್ಒ ರಾಜೀವ್ ಬನ್ಸಲ್ ಗೆ ದೊಡ್ಡ ಮೊತ್ತದ ಪರಿಹಾರ ನೀಡಿರುವುದನ್ನು ಬಹಿರಂಗಪಡಿಸಿದವರ ವರ್ತನೆಯನ್ನು ಸಿಕ್ಕಾ ಅವರು, ‘ಅದೊಂದು ನನ್ನ ವಿರುದ್ಧದ ವೈಯಕ್ತಿಕ ದಾಳಿಯಾಗಿದೆ. ಮತ್ಸರದ, ದೂಷಣೆಯ ಮತ್ತು ಕುಟಿಲ ಪ್ರಯತ್ನವೂ ಅದಾಗಿದೆ’ ಎಂದು ಹೇಳಿದ್ದಾರೆಂದು ವರದಿಯಾಗಿತ್ತು.
ಶೇಷಸಾಯಿ ಹೇಳಿಕೆ: ‘ಸ್ಥಾಪಕರನ್ನು ನಾನು ಭಾನುವಾರ ಭೇಟಿಯಾಗಿ ಮುಕ್ತ ಚರ್ಚೆ ನಡೆಸಿರುವೆ. ಸಂಸ್ಥೆಯ ಹಿತಾಸಕ್ತಿಗೆ ಮಾರಕವಾಗುವ ಕಾರಣಕ್ಕೆ ಮಾಧ್ಯಮಗಳ ಮೂಲಕ ಚರ್ಚೆ ನಡೆಸುವುದು ಬೇಡ ಎಂದು ಎರಡೂ ಕಡೆಯವರು ಒಪ್ಪಿಕೊಂಡಿದ್ದೇವೆ’ ಎಂದು ಶೇಷಸಾಯಿ ಹೇಳಿದ್ದಾರೆ.