ಸರ್ಕಾರಿ ಸೇವೆಯಲ್ಲಿದ್ದು ನಿವೃತ್ತರಾದ ಹಿರಿಯ ನಾಗರಿಕರು ಮಾತ್ರ ಪಿಂಚಣಿ ಸೌಲಭ್ಯ ಪಡೆಯುವ ವ್ಯವಸ್ಥೆ ಇದೆ. ಕಾರ್ಖಾನೆಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದವರು ಸಾಮಾನ್ಯವಾಗಿ ಸೇವೆಯಲ್ಲಿದ್ದಾಗ ಉಳಿತಾಯ ಮಾಡಿದ ಮತ್ತು ನಿವೃತ್ತಿ ಸಮಯದಲ್ಲಿ ಪಡೆದ ನಿವ್ವಳ ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಿಟ್ಟು, ಅದರಿಂದ ಬರುವ ತಿಂಗಳ ಬಡ್ಡಿಯಿಂದ ಜೀವನ ನಿರ್ವಹಣೆಗೆ ದಾರಿ ಮಾಡಿಕೊಂಡಿರುತ್ತಾರೆ. ಆದರೆ ಇತ್ತೀಚೆಗೆ ಬ್ಯಾಂಕ್ಗಳ ಬಡ್ಡಿ ದರ ವಿಪರೀತ ಕುಸಿದಿದೆ.
ಯಾರ ಹಂಗೂ ಇಲ್ಲದೆ ಈ ಬಡ್ಡಿ ದರದಲ್ಲಿ ಬದುಕುವ ಏರ್ಪಾಡು ಮಾಡಿಕೊಂಡಿದ್ದ ಹಿರಿಯ ನಾಗರಿಕರಿಗೆ ಈಗ ದಿನನಿತ್ಯದ ಬದುಕು ದುಸ್ತರವಾಗಿದೆ. ಮುಂದಿನ ದಿನಗಳಲ್ಲಿ ಬಡ್ಡಿ ದರ ಇನ್ನಷ್ಟು ಇಳಿಯುವ ಸಾಧ್ಯತೆ ಇದೆ. ಹೀಗಾಗಿ ಠೇವಣಿ ಪಿಂಚಣಿ ಯೋಜನೆಯೊಂದನ್ನು ರೂಪಿಸಿ, ಕೇವಲ ಬಡ್ಡಿಯನ್ನೇ ಜೀವನ ನಿರ್ವಹಣೆಗೆ ಅವಲಂಬಿಸಿರುವ ಹಿರಿಯ ನಾಗರಿಕರಿಗೆ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಬೇಕು.
-ಸತ್ಯಬೋಧ, ಬೆಂಗಳೂರು