ಶಿವಮೊಗ್ಗ: ರೈಲು ಬೋಗಿಯೊಳಗೆ ಉತ್ತಮ ಗುಣಮಟ್ಟದ (ಆರ್.ಓ) ನೀರು ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದರು.
ನಗರದ ಮಥುರಾ ಪ್ಯಾರಡೈಸ್ನಲ್ಲಿ ಬುಧವಾರ ನಾಗರಿಕ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಶಿವಮೊಗ್ಗ ರೈಲು ನಿಲ್ದಾಣದ ಬಗ್ಗೆ ಕುಂದು–ಕೊರತೆ ಸಭೆಯಲ್ಲಿ ನಾಗರಿಕರು ವಿವಿಧ ವಿಚಾರಗಳ ಚರ್ಚೆ ನಡೆಸಿದರು.
ರೈಲು ನಿಲ್ದಾಣ ಸಮೀಪ ಇರುವ ಆಟೊ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಮನಬಂದತೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ರೈಲುಗಳಲ್ಲಿ ಭಿಕ್ಷುಕರ ಹಾವಳಿ ಹೆಚ್ಚಾಗಿದೆ. ಇವರನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ರೈಲು ಹೊರಡುವ ಸಂದರ್ಭದಲ್ಲಿ ರೈಲು ಫ್ಲಾಟ್ಫಾರ್ಮ್ ಬಿಡುವವರೆಗೂ ನಿಧಾನಕ್ಕೆ ತೆರಳಬೇಕು, ಆಗ ಪ್ರಯಾಣಿಕರಿಗೆ ಹತ್ತಲು ಸುಲಭವಾಗುತ್ತದೆ. ನಿಲ್ದಾಣದಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ರೈಲು ಬರುವ ಸಂದರ್ಭದಲ್ಲಿ ನಿಲ್ದಾಣದ ಸಮೀಪ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಪೊಲೀಸರು ಸ್ಥಳದಲ್ಲಿದ್ದು, ವ್ಯವಸ್ಥಿತ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಟಿಕೆಟ್ ಕೌಂಟರ್ ಆರಂಭಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಉದ್ಯಮಿ ರುದ್ರೇಗೌಡ, ಪ್ರಮುಖರಾದ ಎಸ್.ಬಿ. ಅಶೋಕ್ ಕುಮಾರ್, ಕೆ.ವಿ. ವಸಂತ ಕುಮಾರ್, ಪುರುಷೋತ್ತಮ್, ಎಸ್.ಎಸ್. ಜ್ಯೋತಿ ಪ್ರಕಾಶ್, ಸತೀಶ್ ಕುಮಾರ್ ಶೆಟ್ಟಿ ಇತರರು ಇದ್ದರು.