ಕಲಬುರ್ಗಿ: ವಿಶ್ವ ಮಧ್ವ ಮಹಾ ಪರಿಷತ್ನ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯು ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ನ ಸಹಯೋಗದೊಂದಿಗೆ ನಗರದ ಬ್ರಹ್ಮಪುರ ರಾಯರ ಮಠದಲ್ಲಿ ಮಾರ್ಚ್ 5ರಂದು 16ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಂಚಾಲಕ ಭೀಮಭಟ್ಟ ಬೆಂಕಿ ಮೋತಕಪಲ್ಲಿ ತಿಳಿಸಿದ್ದಾರೆ.
ವಾರ್ಷಿಕೋತ್ಸವ ಅಂಗವಾಗಿ ಫೆ.28ರಿಂದ 21ರ ವರೆಗೆ ದಿ.ವಾಸುದೇವಾಚಾರ್ಯ ಜಹಾಗೀರದಾರ ಸ್ಮರಣಾರ್ಥ ಪಂ.ದ್ವೈಯಪಾಯನಾಚಾರ್ಯ ಲಾತೂರ ಅವರಿಂದ ಜಗನ್ನಾಥ ದಾಸರ ಜೀವನ ಚರಿತ್ರೆ ಹಾಗೂ ಅವರ ಕೃತಿಗಳ ಕುರಿತು ಪ್ರವಚನ ನಡೆಯಲಿದೆ. ಫೆ.19ರಂದು ದಿ.ದ್ರೌಪದಿಬಾಯಿ ಪೂಜಾರ ಮೋತಕಪಲ್ಲಿ ಸ್ಮರಣಾರ್ಥ ಹಾಡಿನ ಸ್ಪರ್ಧೆ, 22ರಂದು 198ನೇ ನಗರ ಸಂಕೀರ್ತನೆ ನಿಮಿತ್ತ ದಿ.ಶ್ರೀನಿವಾಸರಾವ ಬಳೊಂಡಗಿ ಸ್ಮರಣಾರ್ಥ ‘ದಾಸವಾಣಿ ಪ್ರವೀಣರು’ (ಅಂತ್ಯಾಕ್ಷರಿ) ಸ್ಪರ್ಧೆ ನಡೆಯಲಿದೆ.
ಫೆ.23ರಿಂದ 27ರ ವರೆಗೆ ದಿ.ರಾಮಾಚಾರ್ಯ ಜೋಷಿ ಆಡಕಿ ಸ್ಮರಣಾರ್ಥ ಸುಜಯಶ್ರೀ ಎನ್.ಮುರಳಿಧರದಾಸ ಚೆನ್ನೈ ಅವರಿಂದ ಹರಿಕಥಾಮೃತ ಸಾರದ ‘ಸರ್ವ ಪ್ರತೀಕ ಹಾಗೂ ಧ್ಯಾನ ಪ್ರಕ್ರಿಯಾ ಸಂಧಿ’ ಪ್ರವಚನ ನಡೆಯಲಿದೆ. 25ರಂದು ದಿ.ವೆಂಕಣ್ಣಾಚಾರ್ಯ ಘಂಟಿ ಸ್ಮರಣಾರ್ಥ ರಂಗೋಲಿ ಸ್ಪರ್ಧೆ ನಡೆಯಲಿದೆ. 26ರಂದು ದಿ.ಪದ್ಮಾವತಿ ವ್ಯಾಸಮುದ್ರ ಸ್ಮರಣಾರ್ಥ ದಾಸ ಸಾಹಿತ್ಯದ ಲಿಖಿತ ಪರೀಕ್ಷೆ, 28ರಿಂದ ಮಾರ್ಚ್ 4ರ ವರೆಗೆ ಅನಂತರಾವ್ ಕುಲಕರ್ಣಿ ತೋಲಮಾಮಿಡಿ ಸ್ಮರಣಾರ್ಥ ಪಂ.ರಘೋತ್ತಮಾಚಾರ್ಯ ನಾಗಸಂಪಗಿ ಬಾಗಲಕೋಟೆ ಅವರಿಂದ ವಾದಿರಾಜ ವಿರಚಿತ ‘ಸರಸಭಾರತಿ ವಿಲಾಸ’ ಪ್ರವಚನ ನಡೆಯಲಿದೆ.
ಮಾರ್ಚ್ 5ರಂದು ಸಂಜೆ 5 ಗಂಟೆಗೆ ಬ್ರಹ್ಮಪುರದ ರಾಯರ ಮಠದಿಂದ ವೆಂಕಟೇಶ್ವರ ದೇವಸ್ಥಾನದವರೆಗೆ ಶ್ರೀದೇವಿ, ಭೂದೇವಿ ಶ್ರೀನಿವಾಸನ ಹಾಗೂ ದಾಸರ ಭಾವಚಿತ್ರದ ಶೋಭಾಯಾತ್ರೆ ನಡೆಯುವುದು. ಜಗನ್ನಾಥ ವಿಠ್ಠಲ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.