ಮುದ್ದೇಬಿಹಾಳ: ಪ್ರಸ್ತುತ ಮಾನವನ ಯಾಂತ್ರಿಕ ಜಂಜಾಟದ ಬದುಕಿನಲ್ಲಿ ನೆಮ್ಮದಿ ಕಾಣೆಯಾಗಿದ್ದು, 12 ನೇ ಶತಮಾನದ ಶರಣರ ತತ್ವಗಳ ಪಾಲನೆಯೇ ನಮಗಿರುವ ಏಕೈಕ ಪರಿಹಾರ ಎಂದು ನಿವೃತ್ತ ಮುಖ್ಯಶಿಕ್ಷಕ ಸಿ,ಎಂ, ಹಿರೇಮಠ ಹೇಳಿದರು.
ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕವು ಪಟ್ಟಣದ ಅರಿಹಂತ ಎಂ.ಎಸ್. ಡಬ್ಲು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ದಿ.ಪ್ರೊ.ಬಿ.ಎಸ್.ಕಟಗೇರಿ ಸ್ಮರಣಾರ್ಥ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಶರಣ ಧರ್ಮ’ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಸಮಾಜದಲ್ಲಿಯ ಕಂದಾಚಾರ, ಸಂಪ್ರದಾಯ, ಮೂಢನಂಬಿಕೆ, ಅದ್ದೂರಿ ಆಚರಣೆಗಳನ್ನು ಧಿಕ್ಕರಿಸಿ, ಸಹಜ ಸುಲಭವಾದ, ಲಿಂಗ ತಾರತಮ್ಯವಿಲ್ಲದ ಧರ್ಮವನ್ನು ಶರಣರು ಅನುಸರಿಸಿದರು. ಶರಣ ಧರ್ಮ ಸರಳವಾಗಿದ್ದು, ಮುಕ್ತಿ ಮಾರ್ಗದತ್ತ ನಮ್ಮನ್ನು ಒಯ್ಯುತ್ತದೆ. ಈಗಿನ ವಿದ್ಯಾರ್ಥಿಗಳಲ್ಲಿ ಗುರುಗಳ ಬಗ್ಗೆ ಗೌರವ ಕಡಿಮೆಯಾಗಿದ್ದು ಗುರು ಶಿಷ್ಯರ ಸಂಬಂಧ ಗಟ್ಟಿಗೊಳ್ಳಬೇಕು ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ದರ್ಶಿ ರುದ್ರೇಶ ಕಿತ್ತೂರ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ವಚನಗಳ ರಚನೆ, ಸಂಪಾದನೆ ಕುರಿತು ತಿಳಿಸಿದರು. ಅತಿಥಿಯಾಗಿದ್ದ ಅರಿಹಂತ ಚಾರಿಟಬಲ್ ಸಂಸ್ಥೆ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿ, ಆದ್ಯಾತ್ಮದಿಂದ ಎಲ್ಲರೂ ಮಾನಸಿಕ ಶಾಂತಿ ಹೊಂದಬಹುದೆಂದು ಹೇಳಿದರು.
ಸಾಹಿತಿ ಪ್ರೊ.ಬಿ.ಎಂ.ಹಿರೇಮಠ, ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲ್ಲೂಕು ಅದ್ಯಕ್ಷ ಎಸ್.ಬಿ. ಕನ್ನೂರ ಮಾತನಾಡಿದರು. ವೇದಿಕೆ ಯಲ್ಲಿ ಲಲಿತಾ ಕಟಗೇರಿ, ಚನ್ನಪ್ಪ ಕಂಠಿ, ಪ್ರಭು ಕಡಿ, ಎಸ್,ಬಿ,ಬಂಗಾರಿ ಇದ್ದರು.
ಪರಿಷತ್ತಿನ ತಾಲ್ಲೂಕು ಘಟಕದ ಅದ್ಯಕ್ಷ ಬಸವರಾಜ ನಾಲತವಾಡ, ಡಾ.ಬೋರಮ್ಮ ರಾಂಪುರ. ಸಂಗಣ್ಣ ಕತ್ತಿ, ಎಂ,ಎಸ್,ಪಾಟೀಲ, ಚಂದ್ರಶೇಖರ ಪ್ಯಾಟಿಗೌಡರ. ರಾಜು ಕಟಗೇರಿ, ಬಿ ವಾಯ್ ಲಿಂಗದಳ್ಳಿ ಉಪಸ್ಥಿತರಿದ್ದರು. ಮಂಜು ಉಪ್ಪಲದಿನ್ನಿ ಪ್ರಾರ್ಥಿಸಿದರು. ಪ್ರಾಚಾರ್ಯ ಪವನ ಚಲವಾದಿ ನಿರೂಪಿಸಿ, ಬಡಿಗೇರ ವಂದಿಸಿದರು.