ತುಳಸಿ ಪ್ರಭೇದದಲ್ಲೇ ಕೃಷ್ಣತುಳಸಿ ಶ್ರೇಷ್ಠ. ಅಂಥದ್ದೇ ಶ್ರೇಷ್ಠ ಪ್ರೇಮಕಥೆಯೊಂದನ್ನು ಹೇಳಲು ಹೊರಟಿರುವ ನಿರ್ದೇಶಕ ಸುಕೇಶ್ ನಾಯಕ್ ತಮ್ಮ ಚಿತ್ರಕ್ಕೆ ‘ಕೃಷ್ಣತುಳಸಿ’ ಎಂದು ಕರೆದಿದ್ದಾರೆ. ನಾಯಕನ ಹೆಸರು ಕೃಷ್ಣ. ನಾಯಕಿ ತುಳಸಿ. ಪ್ರೇಮಿಗಳ ದಿನದಕ್ಕೆಂದೇ ಚಿತ್ರತಂಡ ಒಂದು ಟೀಸರ್ ಬಿಡುಗಡೆ ಮಾಡಿದೆ.
‘ನಮ್ಮ ಚಿತ್ರದ ನಾಯಕ ಅಂಧ. ಹಾಗೆಂದು ಅಂಧನ ಪಾತ್ರವನ್ನು ಮುಂದಿಟ್ಟುಕೊಂಡು ಅವರ ಬಡತನ, ಕರುಣಾಜನಕ ಸ್ಥಿತಿಯನ್ನು ವಿವರಿಸುವ ಸಿನಿಮಾ ಇದಲ್ಲ. ನಾಯಕ ಕೃಷ್ಣ ಮಾನಸ ಗಂಗೋತ್ರಿಯಲ್ಲಿ ಪ್ರವಾಸಿ ಗೈಡ್ ಆಗಿರುತ್ತಾನೆ. ಆತನದು ಸರ್ಕಾರಿ ಉದ್ಯೋಗ’ ಎಂದು ಸುಕೇಶ್ ನಾಯಕ್ ಹೇಳಿದರು.
ಸಂಚಾರಿ ವಿಜಯ್ ಕೃಷ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಅಂಧನ ಪಾತ್ರ ಮಾಡಲು ಅವರು ಸಾಕಷ್ಟು ಹೋಂ ವರ್ಕ್ ಮಾಡಿಕೊಂಡಿದ್ದಾರೆ.
‘ಕೃಷ್ಣ ಮಾನಸಿಕವಾಗಿ ಸದೃಢ. ಅಂಧರ ಜೀವನ ಹೇಗಿರುತ್ತದೆ ಎಂದು ಆತನ ಮೂಲಕ ತೋರಿಸುವ ಪ್ರಯತ್ನ ಚಿತ್ರದಲ್ಲಿದೆ’ ಎಂದು ಅವರು ಹೇಳಿದರು. ಮೇಘಶ್ರೀ ತುಳಸಿಯಾಗಿ ನಟಿಸಿದ್ದಾರೆ. ತಮಗೆ ಮುಂದೆ ಮತ್ತೊಮ್ಮೆ ಇಂಥದ್ದೊಂದು ಪಾತ್ರ ಸಿಗುತ್ತದೋ ಇಲ್ಲವೋ ಎನ್ನುವಷ್ಟು ಪ್ರಮುಖ ಪಾತ್ರ ಅವರದ್ದಂತೆ.
ನಿರ್ದೇಶಕರ ಕನಸಿಗೆ ಕಣ್ಣಾಗಿದ್ದೇನೆ ಎಂದರು ಛಾಯಾಗ್ರಾಹಕ ನವೀನ್ ಅಕ್ಷಿ. ‘ಅಂಧರು ಶಬ್ದದಿಂದಲೇ ಎಲ್ಲವನ್ನೂ ಗ್ರಹಿಸುತ್ತಾರೆ. ಹಾಗಾಗಿ ಚಿತ್ರದಲ್ಲಿ ಸಂಗೀತಕ್ಕೆ ಒಳ್ಳೆಯ ಅವಕಾಶವಿದೆ’ ಎಂದರು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್. ಫೆಬ್ರುವರಿಯಲ್ಲಿ ಚಿತ್ರೀಕರಣ ಮುಗಿಸಿ ಮೇ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಎಂ. ನಾರಾಯಣ ಸ್ವಾಮಿ ಹೇಳಿದರು.
ರಿಯಲ್ ಎಸ್ಟೇಟ್ ಉದ್ಯಮಿಯಾದ ಅವರು ಮೊದಲ ಬಾರಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿದೆ. ಮೈಸೂರಿನಲ್ಲಿ ಹನ್ನೆರಡು ದಿನಗಳ ಕಾಲ ಬಸ್ಸಿನಲ್ಲಿ ಹಾಗೂ ಮಡಿಕೇರಿ, ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ.