ವಿಜಯಪುರ: ಉತ್ತಮ ಅವಕಾಶ ದೊರೆತಾಗ, ಅವುಗಳ ಪ್ರಯೋಜನ ಪಡೆದುಕೊಂಡಾಗ ಮಾತ್ರ ಯಶಸ್ವಿ ಯಾಗಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದ ಸಿದ್ಧೇಶ್ವರ ಕಲಾ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಲಾ ಶಿಕ್ಷಕ ಮಸ್ತಾನ ತಿಕೋಟಾ ಹಾಗೂ ಇಟ್ಟಂಗಿಹಾಳದ ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಶಿಕ್ಷಣ ನೀಡುವಂತಾಗಬೇಕು. ಆಗ ಮಾತ್ರ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಜಗತ್ತಿಗೆ ಪ್ರಕಾಶಿಸಲು ಸಾಧ್ಯ ಎಂದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ ಕಲೆ ಯಾರ ಸ್ವತ್ತಲ್ಲ. ಅದು ಮಕ್ಕಳ ಮನಸಿನಲ್ಲಿ ಚಿಗುರೊಡೆದು ಜೀವನಕ್ಕೆ ಮಾರ್ಗದರ್ಶನವಾಗುತ್ತದೆ ಎಂದರು. ಪರಿಸರ ರಕ್ಷಣೆ ನಮ್ಮೆಲರ ಹೊಣೆ ಎಂಬುದನ್ನು ವಿದ್ಯಾರ್ಥಿಗಳು ತಮ್ಮ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ ಎಂದರು.
ಯುವ ಮುಖಂಡ ಜಾವೇದ ಬಾಗವಾನ ಅಧ್ಯಕ್ಷತೆ ವಹಿಸಿದ್ದರು. ಕಲಾ ಶಿಕ್ಷಕ ಮಸ್ತಾಕ ತಿಕೋಟಾ, ಸಿದ್ಧೇಶ್ವರ ಕಲಾ ಮಂದಿರದ ನಿರ್ದೇಶಕ ಪೊನ್ನಪ್ಪ ಕಡೇಮನಿ, ಪಾಲಿಕೆ ಸದಸ್ಯ ಶರಣಪ್ಪ ಯಕ್ಕುಂಡಿ, ಮೈಬೂಬ ತಿಕೋಟಾ, ಲಿಂಗರಾಜ ಕಾಂಚಾಪುರ, ಸಾಧಿಕ ಮುಲಾಳ, ಮಲ್ಲಿಕಾರ್ಜುನ ಸಿಂಧೆ, ರುದ್ರೇಶ ಕುಂಬಾರ, ಪ್ರಶಾಂತ ಮನಗೂಳಿ ಉಪಸ್ಥಿತರಿದ್ದರು.
ಬಿ.ಎಸ್.ಹತ್ತಿ ನಿರೂಪಿಸಿದರು, ಜಿ.ಎಸ್.ಪಾಟೀಲ ವಂದಿಸಿದರು.
* ಉತ್ತರ ಕರ್ನಾಟಕದಲ್ಲಿ ಚಿತ್ರಕಲಾ ಹಾಗೂ ಶಿಕ್ಷಣ ರಂಗದಲ್ಲಿ ನೂತನ ಪ್ರತಿಭೆಗಳು ಹೊರ ಹೊಮ್ಮುತ್ತಿರುವುದು ಸಂತಸದ ಸಂಗತಿ
-ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ