ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನುಷ್ಯ ಜಾತಿ ತಾನೊಂದೇ ವಲಂ’ ಘೋಷವಾಕ್ಯವಾಗಲಿ’

ಆಡಳಿತದಲ್ಲಿ ಪಂಪನ ಆಶಯ ಅನುಷ್ಠಾನಗೊಳ್ಳಲಿ: ಹಂಪನಾ
Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮಯೂವರ್ಮ ವೇದಿಕೆ (ಬನವಾಸಿ): ಹಿರಿಯ ಸಾಹಿತಿಗಳಾದ ಬಿ.ಎ. ಸನದಿ ಹಾಗೂ ಹಂ.ಪ. ನಾಗರಾಜಯ್ಯ ಅವರಿಗೆ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ನಡೆದ ಕದಂಬೋತ್ಸವದ ವೇದಿಕೆಯಲ್ಲಿ ಶನಿವಾರ ಸಂಜೆ ಪಂಪ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಾಡಿನ ವಿವಿಧೆಡೆಗಳಿಂದ ಬಂದಿದ್ದ ಸಾಹಿತಿಗಳು, ಕವಿಗಳು, ಕಲಾಸಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಬಿ.ಎ. ಸನದಿ, ‘ಆದಿಕವಿ ಪಂಪ 11 ಶತಮಾನಗಳ ಹಿಂದೆ ತನ್ನ ವಿಕ್ರಮಾರ್ಜುನ ವಿಜಯ ಮಹಾಕಾವ್ಯದಲ್ಲಿ ‘ಮಾನವ ಜಾತಿ ತಾನೊಂದೇ ವಲಂ’ ಎನ್ನುವ ಜಾತ್ಯತೀತ ವಿಚಾರವನ್ನು ಪ್ರಚುರಪಡಿಸಿದ್ದ. ಇದನ್ನು ರಾಜ್ಯ ಸರ್ಕಾರ ಘೋಷವಾಕ್ಯವಾಗಿ ಸ್ವೀಕರಿಸಬೇಕು. ಸಾರಿಗೆ ಸಂಸ್ಥೆಯ ಬಸ್‌, ಶಾಲೆ– ಕಾಲೇಜು, ಲೋಕದ ಜನರಿಗೆ ದೃಷ್ಟಿ ಬೀಳುವ ಸ್ಥಳಗಳಲ್ಲಿ ಈ ಘೋಷವಾಕ್ಯವನ್ನು ಪ್ರಕಟಿಸಬೇಕು. ರಾಜ್ಯದ ಪ್ರಮುಖ ಸಚಿವರಾಗಿರುವ ಆರ್‌.ವಿ.ದೇಶಪಾಂಡೆ ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರಬೇಕು’ ಎಂದರು.

ಸಾಹಿತಿ ಹಂ.ಪ. ನಾಗರಾಜಯ್ಯ, ‘ಪಂಪ ಜಗತ್ತು ಕಂಡ ಅಪೂರ್ವ ಕವಿಯಾಗಿದ್ದು, ನಮ್ಮ ಭಾಗ್ಯಕ್ಕೆ ಅವನು ಕರ್ನಾಟಕದಲ್ಲಿ ಹುಟ್ಟಿದ್ದಾನೆ. ನಾಡು ನುಡಿಗಳ ಉತ್ಸಾಹ, ವೈಭವ, ಪ್ರೇಮ ಬಿತ್ತಿದ ಕವಿ ಪಂಪ. ವ್ಯಾಸ, ವಾಲ್ಮೀಕಿ, ಷೇಕ್ಸ್‌ಪಿಯರ್‌ನಂತಹ ಕವಿಗಳ ಸಾಲಿನಲ್ಲಿ ಈ ಕವಿಯ ಹೆಸರಿನಲ್ಲಿ ಸ್ವೀಕರಿಸಿದ ಪ್ರಶಸ್ತಿ ಮರೆಯಲಾಗದ ಕ್ಷಣ. ಈ ಪ್ರಶಸ್ತಿಗಿಂತ ದೊಡ್ಡ ಪ್ರಶಸ್ತಿ ಇನ್ನಾವುದೂ ನನಗೆ ಬೇಕಾಗಿಲ್ಲ’ ಎಂದು ಅಭಿಮಾನದಿಂದ ನುಡಿದರು.

ಸಚಿವೆ ಉಮಾಶ್ರೀ ಗೈರು
ಐತಿಹಾಸಿಕ ಕದಂಬೋತ್ಸವ ಮತ್ತು ಪಂಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಗೈರಾಗಿರುವುದು ತಮಗೆ ಬೇಸರ, ಅತೃಪ್ತಿ ತಂದಿದೆ ಎಂದು ಹಂ.ಪ.ನಾಗರಾಜಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT