ದಾವಣಗೆರೆ: ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯು, ಇಲ್ಲಿ ಇದೇ 20 ರಿಂದ 23ರವರೆಗೆ ಅಖಿಲ ಭಾರತ ಸೀನಿಯರ್ ಡಬಲ್ಸ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಹಮ್ಮಿಕೊಂಡಿದೆ.
‘ಪುರುಷರ ಡಬಲ್ಸ್, ಮಹಿಳೆಯರ ಡಬಲ್ಸ್, ಮಿಶ್ರ ಡಬಲ್ಸ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಈಗಾಗಲೇ 90 ತಂಡಗಳು ಹೆಸರು ನೊಂದಾಯಿಸಿವೆ. ಪುರುಷರ ವಿಭಾಗದಲ್ಲಿ 45 ತಂಡಗಳು ಹೆಸರು ನೋಂದಾಯಿಸಿ ಕೊಂಡಿವೆ’ ಎಂದು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಉಪಾಧ್ಯಕ್ಷ ಜೆ. ಬಿ.ಉಮೇಶ್ ಶನಿವಾರ ತಿಳಿಸಿದರು.
ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಸಹಯೋಗದಲ್ಲಿ ನಡೆಯುವ ಈ ಟೂರ್ನಿಯು ₹ 2 ಲಕ್ಷ ನಗದು ಬಹುಮಾನ ಹೊಂದಿದೆ. 20ರಂದು ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.
ಕಬೀರ್ ಕನ್ಝರ್ಕರ್ (ರೈಲ್ವೇಸ್) ಮತ್ತು ಅಕ್ಷಯ್ ರಾವತ್ (ಮಹಾರಾಷ್ಟ್ರ) ಅವರಿಗೆ ಅಗ್ರ ಶ್ರೇಯಾಂಕ ನೀಡಲಾಗಿದೆ. ಎಸ್.ವೆಂಕಟೇಶಪ್ರಸಾದ್ ಮತ್ತು ಜಗದೀಶ್ ಯಾದವ್ (ಇಬ್ಬರೂ ಕರ್ನಾಟಕ) ಎರಡನೇ ಶ್ರೇಯಾಂಕ ಪಡೆದಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಕುಹೂ ಗಾರ್ಗ್ (ಉತ್ತರಾಖಂಡ) ಮತ್ತು ನಿಂಗ್ಶಿ ಬ್ಲಾಕ್ ಹಝಾರಿಕಾ (ಅಸ್ಸಾಂ) ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಮಿಶ್ರ ಡಬಲ್ಸ್ನಲ್ಲಿ ಸಂಜೀತ್ ಎಸ್. ಮತ್ತು ಧನ್ಯಾ ನಾಯರ್ ಅವರಿಗೆ ಮೊದಲ ಶ್ರೇಯಾಂಕ ನೀಡಲಾಗಿದೆ ಎಂದು ತಿಳಿಸಿದರು.