ಧಾರವಾಡ: ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕ ಮೃತಪಟ್ಟಿದ್ದಾನೆ ಎಂಬ ತಪ್ಪು ಗ್ರಹಿಕೆಯಿಂದಾಗಿ ಆತನ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ ಕುಟುಂಬದವರು, ನಂತರ ಆತ ಬದುಕಿರುವುದು ತಿಳಿದು ಮತ್ತೆ ಆಸ್ಪತ್ರೆಗೆ ಸಾಗಿಸಿದ ಘಟನೆ ತಾಲ್ಲೂಕಿನ ಮನಗುಂಡಿಯಲ್ಲಿ ಶನಿವಾರ ನಡೆದಿದೆ.
ನಾಯಿ ಕಡಿತದಿಂದ ಅಸ್ವಸ್ಥನಾದ ಗ್ರಾಮದ ಕುಮಾರ ಮರೇವಾಡನ (16) ಆರೋಗ್ಯದಲ್ಲಿ ಏರುಪೇರು ಉಂಟಾಗಿ, ನಾಲ್ಕು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಶ್ವಾಸಕೋಶದಲ್ಲಿ ಸಮಸ್ಯೆ ಉಂಟಾಗಿ ಉಸಿರಾಟಕ್ಕೆ ತೊಂದರೆಯಾಗಿತ್ತು. ಹೀಗಾಗಿ ಆತ ಬದುಕುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವೈದ್ಯರು, ಆತನನ್ನು ಮನೆಗೆ ಕರೆದ್ಯೊಯಲು ಸೂಚಿಸಿದ್ದರು.
ಆದರೆ, ಈ ವಿಷಯವನ್ನು ತಪ್ಪಾಗಿ ಗ್ರಹಿಸಿದ ಆತನ ಸಂಬಂಧಿಕರು ಊರಿನ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಮಾರ್ಗ ಮಧ್ಯದಲ್ಲೇ ಕೃತಕ ಉಸಿರಾಟ ಇಲ್ಲದೆಯೂ ಆತನ ದೇಹದಲ್ಲಿ ಚಲನೆ ಕಂಡು, ಕೂಡಲೇ ಮತ್ತೆ ಅದೇ ಆಂಬುಲೆನ್ಸ್ನಲ್ಲೇ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಆತ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಬಾಲಕನ ಸಂಬಂಧಿ ‘ಪ್ರಜಾವಾಣಿ’ಗೆ ತಿಳಿಸಿದರು.
ಘಟನೆಯ ವಿವರ: ಕುಮಾರ ಮರೇವಾಡನಿಗೆ ಒಂದೂವರೆ ತಿಂಗಳ ಹಿಂದೆ ನಾಯಿಯೊಂದು ಕಚ್ಚಿತ್ತು. ಪೋಷಕರು ಆತನಿಗೆ ನಾಟಿ ಔಷಧ ಕೊಡಿಸಿದ್ದರು. ಆದರೆ, ಒಂದು ವಾರದ ಹಿಂದೆ ಆತನ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.