ದೊಡ್ಡಬಳ್ಳಾಪುರ: ‘ಎತ್ತಿನಹೊಳೆ ಯೋಜನೆಗೆ ಸಾಕಷ್ಟು ಅಡ್ಡಿಗಳು ಎದುರಾಗಿರುವುದು ಸಾಮಾನ್ಯ. ಇರುವ ಅಡ್ಡಿ ಆತಂಕಗಳನ್ನು ಒಂದೊಂದೆ ನಿವಾರಣೆಯಾಗುತ್ತಿವೆ. ಶೀಘ್ರದಲ್ಲಿ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಹರಿಸುತ್ತೇವೆ’ ಸಂಸತ್ ಸದಸ್ಯ ಎಂ.ವೀರಪ್ಪ ಮೊಯಿಲಿ ಹೇಳಿದರು.
ಅವರು ನಗರಸಭಾ ಆವರಣದಲ್ಲಿ 2015–16 ಮತ್ತು 2016–17ನೇ ಸಾಲಿನ ವಿವಿಧ ಅನುದಾನಗಳಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ಮತ್ತು ವಿವಿಧ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ನಗರಕ್ಕೆ ನೀರಿನ ಅಭಾವ ಇರುವ ಹಿನ್ನೆಲೆ ಜಕ್ಕಲುಮಡುಗು ಜಲಾಶಯದಿಂದ ಶೇ 10ರಷ್ಟು ನೀರನ್ನು ಹೆಚ್ಚುವರಿಯಾಗಿ ನೀಡಿ, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳ ಜೊತೆಗೆ ಮತ್ತೆರಡು ಡಯಾಲಿಸಿಸ್ ಯಂತ್ರಗಳಿಗೆ ಅನುದಾನದ ನೀಡುವಂತೆ ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಶ್ರೀವತ್ಸ, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿ ನಟರಾಜ್,ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಲ್ಲೇಶ್ ಹಾಗೂ ಸದಸ್ಯರು ಭಾಗವಹಿಸಿದ್ದರು.