ನವದೆಹಲಿ: ಓ.ಎಲ್.ನಾಗಭೂಷಣಸ್ವಾಮಿ ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವ ‘ಎ.ಕೆ.ರಾಮಾನುಜನ್ ಅವರ ಆಯ್ದ ಪ್ರಬಂಧಗಳು’ ಕೃತಿಗೆ 2016ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಬಹುಮಾನ ದೊರೆತಿದೆ.
₹50 ಸಾವಿರ ನಗದು ಮತ್ತು ತಾಮ್ರಪ್ರಶಸ್ತಿ ಪತ್ರವನ್ನು ಒಳಗೊಂಡ ಬಹುಮಾನವನ್ನು ಸದ್ಯದಲ್ಲಿಯೇ ನಡೆಯುವ ಸಮಾರಂಭದಲ್ಲಿ ನೀಡಲಾಗುವುದು.
ಪ್ರೊ.ಸಿ.ಎನ್.ರಾಮಚಂದ್ರನ್, ಡಾ.ಪುರುಷೋತ್ತಮ ಬಿಳಿಮಲೆ ಹಾಗೂ ಪ್ರೊ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರನ್ನು ಒಳಗೊಂಡಿದ್ದ ಆಯ್ಕೆ ಸಮಿತಿಯು ಈ ಕೃತಿಯನ್ನು ಬಹುಮಾನಕ್ಕೆ ಶಿಫಾರಸು ಮಾಡಿತ್ತೆಂದು ಅಕಾಡೆಮಿ ತಿಳಿಸಿದೆ.
ಮನೋಹರ ಗ್ರಂಥಮಾಲಾ 2013ರಲ್ಲಿ ಈ ಕೃತಿಯನ್ನು ಪ್ರಕಟಿಸಿತ್ತು. 2010 ಜನವರಿ ಮತ್ತು 2014ರ ಡಿಸೆಂಬರ್ 31ರ ನಡುವೆ ಪ್ರಕಟವಾದ ಕೃತಿಗಳನ್ನು ಅನುವಾದ ಬಹುಮಾನಕ್ಕೆ ಪರಿಗಣಿಸಲಾಗಿತ್ತು. ಅಕಾಡೆಮಿಯ ಕಾರ್ಯನಿರ್ವಾಹಕ ಮಂಡಳಿಯು ಇಲ್ಲಿ ಸಭೆ ಸೇರಿ ಒಟ್ಟು 22 ಭಾಷೆಗಳ ಕೃತಿಗಳಿಗೆ ಅನುವಾದ ಬಹುಮಾನ ನೀಡುವ ಶಿಫಾರಸುಗಳನ್ನು ಅನುಮೋದಿಸಿತು.