ಯಾವುದಾದರೂ ಬೆಳೆಗಳ ಬಗ್ಗೆ ವಿವರಣೆ ಕೇಳಿದರೆ ಆ ಬೆಳೆಯನ್ನು ಯಾರು ಬೆಳೆಯುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡುತ್ತಾರೆ. ಜೊತೆಗೆ ದೂರವಾಣಿ ಮೂಲಕ ಅಂಥ ಬೆಳೆಗಾರರ ಸಂಪರ್ಕವನ್ನೂ ನೀಡುತ್ತಾರೆ. ಬೆಳೆಗಳ ಕುರಿತು ಮಾತ್ರವಲ್ಲದೇ ಮೀನುಗಾರಿಕೆ, ರೇಷ್ಮೆ ಕೃಷಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಹಂದಿ ಸಾಕಾಣಿಕೆ, ಜೇನು ಕೃಷಿಕರ ಬಗ್ಗೂ ಇವರಲ್ಲಿ ಮಾಹಿತಿಗಳಿವೆ.
ಪ್ರತಿ ಬೆಳೆಗೂ ಡೈರಿ
ಪ್ರತಿಯೊಂದು ಬೆಳೆಗೂ ಒಂದು ಪ್ರತ್ಯೇಕ ಡೈರಿಯನ್ನು ಮಾಡಿದ್ದಾರೆ. ಅದರಲ್ಲಿ ಬೆಳೆಯ ಬಗ್ಗೆ ಮತ್ತು ಬೆಳೆಗಾರನ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆಹಾಕುತ್ತಾರೆ. ಟೀವಿಯಲ್ಲಿ ಬರುವ ಕೃಷಿ ಮಾಹಿತಿಗಳನ್ನು, ಯಶಸ್ವಿ ಕೃಷಿಕರ ಸಂದರ್ಶನಗಳನ್ನು, ಕೃಷಿರಂಗ ಕಾರ್ಯಕ್ರಮಗಳನ್ನು ತಪ್ಪದೇ ವೀಕ್ಷಿಸುವ ಇವರು ಅದರಲ್ಲಿನ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಈ ಕಾರ್ಯಕ್ಕೆ ಹೆಂಡತಿಯೂ ಸಾಥ್ ನೀಡುತ್ತಾರೆ. ಒಂದು ವೇಳೆ ಟೀವಿಯಲ್ಲಿ ಬರುವ ಕೃಷಿ ಕಾರ್ಯಕ್ರಮಗಳನ್ನು ನೋಡಲು ಆಗದಿದ್ದರೆ ಆ ಚಾನೆಲ್ನವರಿಗೆ ಫೋನ್ ಮಾಡಿ ಆ ಕಾರ್ಯಕ್ರಮದ ವಿಡಿಯೊ ಕ್ಲಿಪ್ ತರಿಸಿಕೊಳ್ಳುವಷ್ಟರ ಮಟ್ಟಿಗೆ ಇವರ ಕೃಷಿ ಕಾರ್ಯ ಮುಂದುವರಿದಿದೆ!
ಇದರ ಜೊತೆಗೆ, ಎಲ್ಲ ದಿನ ಪತ್ರಿಕೆಗಳು, ಕೃಷಿ ಪತ್ರಿಕೆಗಳು ಇವರ ಮನೆಗೆ ಬರುತ್ತವೆ. ಅದರಲ್ಲಿನ ಕೃಷಿಪುರವಣಿಗಳಲ್ಲಿನ ವಿಶಿಷ್ಟ ಲೇಖನಗಳನ್ನು ಆಯಾ ಪತ್ರಿಕೆಯ ಹೆಸರಿನಲ್ಲಿಯೇ ಪ್ರತ್ಯೇಕ ಡೈರಿ ಮಾಡಿ ಅಂಟಿಸಿಟ್ಟುಕೊಂಡಿದ್ದಾರೆ. ಇವರ ಬಳಿ ವಿವಿಧ ಬೆಳೆಗಳ 160ಕ್ಕೂ ಹೆಚ್ಚು ಸಿ.ಡಿಗಳಿವೆ. ಅದರಲ್ಲಿ ಆ ಬೆಳೆಯ ಲಕ್ಷಣಗಳು, ರೋಗನಿಯಂತ್ರಣ, ಗೊಬ್ಬರ ಹಾಕುವ ವಿಧಾನ, ನೀರುಣಿಸುವ ವಿಧಾನ, ನೀರು ಪೋಲಾಗದಂತೆ ಯಾವ ರೀತಿ ಕೃಷಿ ಮಾಡಬೇಕು ಎಂಬ ಮಹತ್ವದ ಅಂಶಗಳು ಇವೆ. ಒಟ್ಟಿನಲ್ಲಿ, ಇವರ ಮನೆಯೇ ಕೃಷಿ ಮಾಹಿತಿ ಕೇಂದ್ರ ಮತ್ತು ವಾಚನಾಲಯದಂತಿದೆ.
‘ಕೃಷಿ ವಿಷಯಗಳನ್ನು ಮತ್ತು ಕೃಷಿಯಲ್ಲಿ ಸಾಧನೆ ಮಾಡಿದವರ ಬಗ್ಗೆ ಮಾಹಿತಿಗಳನ್ನು ಓದಿ ಅಷ್ಟಕ್ಕೆ ಬಿಟ್ಟರೆ ಅದು ಕೆಲದಿನಗಳಾದ ನಂತರ ಮರೆತುಹೋಗುತ್ತದೆ. ಈ ರೀತಿ ಸಂಗ್ರಹಿಸಿಟ್ಟುಕೊಂಡರೆ ತಮಗೂ ಮತ್ತು ಬೇರೆಯವರಿಗೂ ಉಪಯೋಗವಾಗುತ್ತದೆ’ ಎನ್ನುವ ಬಸನಗೌಡರು, ಇಷ್ಟೆಲ್ಲ ಸಂಗ್ರಹಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಮಹತ್ವದ ಪುಸ್ತಕಗಳು, ಸಿ.ಡಿಗಳು, ಕೃಷಿ ಬಗ್ಗೆ ಯಾವುದೇ ಲೇಖನಗಳು ಸಿಗುತ್ತವೆಂದರೆ ಎಷ್ಟೇ ಖರ್ಚಾದರೂ ಅದಕ್ಕೆ ಲೆಕ್ಕಿಸದೆ ಅದನ್ನು ಪಡೆದುಕೊಳ್ಳುತ್ತಾರೆ.
ತಮ್ಮ ಗ್ರಾಮದ ಕೃಷಿಕರಿಗೆ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿಸಿದ ಬಸನಗೌಡರು, ಸುಮಾರು 20 ಕೃಷಿಕರ ಹೊಲಗಳಲ್ಲಿ ಶೇಡ್ ಹೌಸ್ಗಳನ್ನು ನಿರ್ಮಿಸಿ ವಿನೂತನ ಕೃಷಿ ಮಾಡಲು ತೊಡಗಿಸಿದ್ದಾರೆ. ಮಲ್ಚಿಂಗ್ಪೇಪರ್ ಬಳಸಿ ಕಡಿಮೆ ನೀರು ಬಳಸಿ ಮಾಡುವ ಕೃಷಿ ಹೀಗೆ ಹತ್ತು ಹಲವು ಪ್ರಯೋಗಗಳನ್ನು ಮೊದಲು ತಾವು ಮಾಡಿ ನಂತರ ತಮ್ಮ ಗ್ರಾಮದ ಯುವಕರನ್ನೂ ಪ್ರೋತ್ಸಾಹಿಸುತ್ತಾರೆ.
‘ನನಗೆ ಇಷ್ಟೊಂದು ಮಾಹಿತಿಗಳನ್ನು ಮತ್ತು ಪುಸ್ತಕಗಳನ್ನು ಸಂಗ್ರಹಿಸಲು ಮತ್ತು ಕೃಷಿಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡಲು ಕೃಷಿ ವಿಶ್ವವಿದ್ಯಾಲಯದ ಅನೇಕ ವಿಜ್ಞಾನಿಗಳು ಕಾರಣ’ ಎನ್ನುವುದು ಬಸನಗೌಡ ಅವರ ಮಾತು. ಧಾರವಾಡದ ಕೃಷಿ ವಿಶ್ವ ವಿದ್ಯಾಲಯದವರು ಕೂಡ ಕೆಲವು ಯಶಸ್ವಿ ಕೃಷಿಕರ ಬಗ್ಗೆ ಮಾಹಿತಿಗಳನ್ನು ಇವರ ಬಳಿ ಪಡೆಯುತ್ತಾರೆ. ಬಹುತೇಕ ಕೃಷಿ ವಿಜ್ಞಾನಿಗಳು ಇವರೊಂದಿಗೆ ಸಂಪರ್ಕದಲ್ಲಿದ್ದು, ಯಾವುದೇ ರೈತರು ತಮ್ಮ ಬಳಿ ಮಾಹಿತಿಗಾಗಿ ಬಂದರೆ ಬಸನಗೌಡರ ಬಳಿ ಕಳಿಸುತ್ತಾರೆ.