ನವದೆಹಲಿ: 2016–17ನೇ ಬೆಳೆ ವರ್ಷದಲ್ಲಿ ದೇಶದಲ್ಲಿ ಬೇಳೆಕಾಳುಗಳ ಉತ್ಪಾದನೆ ಪ್ರಮಾಣ 2.2 ಕೋಟಿ ಟನ್ಗೆ ಏರಲಿದೆ ಎಂದು ಅಂದಾಜಿಸಲಾಗಿದೆ. ಹಿಂದಿನ ಬೆಳೆ ವರ್ಷದಲ್ಲಿ ಇದು 1.6 ಕೋಟಿ ಟನ್ಗಳಷ್ಟಿತ್ತು.
ಆದರೂ, ಈಗ ಮಾಡಲಾಗಿರುವ ಅಂದಾಜು ಇಳುವರಿಯು ದೇಶದಲ್ಲಿ ಬೇಳೆಕಾಳುಗಳಿಗೆ ಇರುವ ಬೇಡಿಕೆ ಪ್ರಮಾಣಕ್ಕಿಂತ ಕಡಿಮೆಯೇ ಇದೆ. ದೇಶಿಯ ಬಳಕೆಯ ಉದ್ದೇಶಕ್ಕೆ ನಮ್ಮಲ್ಲಿ 2.4 ಕೋಟಿ ಟನ್ಗಳಷ್ಟು ಬೇಳೆಕಾಳುಗಳು ಬೇಕು. ಪ್ರತಿ ವರ್ಷ ಈ ಪ್ರಮಾಣ ಹೆಚ್ಚುತ್ತಲೇ ಇದೆ.
ಬೇಳೆಕಾಳುಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಸರ್ಕಾರ, ದೇಶದ ಬೇಡಿಕೆ ಪೂರೈಸುವುದಕ್ಕಾಗಿ ಆಮದಿನ ಮೇಲಿನ ಅವಲಂಬನೆ ತಗ್ಗಿಸಲು ಐದು ವರ್ಷಗಳ ಮಾರ್ಗನಕ್ಷೆಯೊಂದನ್ನು ಸಿದ್ಧಪಡಿಸಿದೆ.
‘2020–21ರ ವೇಳೆಗೆ 2.4 ಕೋಟಿ ಟನ್ಗಳಷ್ಟು ಬೇಳೆಕಾಳು ಉತ್ಪಾದಿಸುವ ಗುರಿ ತಲುಪಲು ಯೋಜಿಸುತ್ತಿದ್ದೇವೆ’ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅನುಕೂಲಕರ ಮಳೆ ಮಾರುತಗಳ ಹೊರತಾಗಿ, ಪೂರ್ವದ ರಾಜ್ಯಗಳಲ್ಲಿ ಭತ್ತದ ಕೊಯ್ಲಿನ ನಂತರ ಗದ್ದೆಗಳಲ್ಲಿ ಬೇಳೆಕಾಳುಗಳನ್ನು ಬೆಳೆಯಲು ಉತ್ತೇಜನ ನೀಡುವ ಸಂಬಂಧ ಜಾರಿಗೆ ತಂದಿರುವ ನೀತಿಯೂ ಹೆಚ್ಚಿನ ಇಳುವರಿಗೆ ಕಾರಣವಾಗಲಿದೆ ಎಂದು ಸರ್ಕಾರ ಅವರು ಹೇಳಿದ್ದಾರೆ.