ಬೀದರ್: ಸರ್ಕಾರಿ ನೌಕರಿಯಲ್ಲಿ ಬಡ್ತಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವುದರ ವಿರುದ್ಧ ರಾಜ್ಯ ಸರ್ಕಾರ ಅಗತ್ಯ ದಾಖಲೆಗಳೊಂದಿಗೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
ಸಂವಿಧಾನದ ನಾಲ್ಕನೇ ಭಾಗದಲ್ಲಿರುವ ‘ರಾಜ್ಯನೀತಿ ನಿರ್ದೇಶಕ ತತ್ವಗಳು’ ಒಳಗೊಂಡಿರುವ 38 ರಿಂದ 47ರ ವರೆಗಿನ ಅನುಚ್ಛೇದಗಳು ಎಲ್ಲ ಕ್ಷೇತ್ರಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸಲು ಮತ್ತು ದುರ್ಬಲರನ್ನು ಸಂರಕ್ಷಣೆ ಮಾಡಲು, ಜನರ ಸ್ಥಾನಮಾನ, ಸೌಲಭ್ಯಗಳಲ್ಲಿ ಇರುವ ಅಸಮಾನತೆಯನ್ನು ತೊಡೆದು ಹಾಕಲು ಸರ್ಕಾರ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಅರುಣ ಪಟೇಲ, ಮನೋಹರ ಹೊಸಮನಿ, ಪ್ರಮುಖರಾದ ರಮೇಶ ಬೆಲ್ದಾರ್, ದಯಾಸಾಗರ ಭಂಡೆ, ಅಶೋಕ ಗಾಯಕವಾಡ, ಪ್ರಭು ಬಸಂತಪುರ, ದೀಲಿಪ ಮರ್ಪಳ್ಳಿ ಮತ್ತಿತ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.